ಕರ್ನಾಟಕ

ಅಧಿಕಾರಕ್ಕಾಗಿ ಮತ್ತೊಬ್ಬ ಅಣ್ಣ ಹುಟ್ಟು: ಕೋಡಿಮಠ ಸ್ವಾಮೀಜಿ ಭವಿಷ್ಯ

Pinterest LinkedIn Tumblr


ಹಾಸನ: ಕಾಂಗ್ರೆಸ್‌ನೊಳಗಿನ ಕಲಹದಿಂದಾಗಿ ರಾಜ್ಯ ಸಮ್ಮಿಶ್ರ ಸರಕಾರ ಶೀಘ್ರ ಪತನವಾಗಲಿದೆ ಎಂಬ ವದಂತಿ ಜೋರಾಗಿರುವಾಗಲೇ ರಾಜ್ಯದಲ್ಲಿ ರಾಜಕೀಯ ವಿಪ್ಲವ ಇನ್ನೂ ಮುಂದುವರಿಯಲಿದ್ದು, ಅಧಿಕಾರಕ್ಕಾಗಿ ಮತ್ತೊಬ್ಬ ಅಣ್ಣ ಹುಟ್ಟಿಕೊಳ್ಳಲಿದ್ದಾನೆ ಎಂದು ಹಾಸನ ಜಿಲ್ಲೆ ಕೋಡಿಮಠದ ಶ್ರೀ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಅರಸೀಕೆರೆ ತಾಲೂಕು ಮಾಡಾಳು ಗ್ರಾಮದಲ್ಲಿ ಮಾತನಾಡಿದ ಅವರು, ಏನಾಗಲಿದೆ ಎಂಬುದನ್ನು ಮುಂದಿನ ನವೆಂಬರ್ ವರೆಗೆ ಕಾದು ನೋಡಿ ಎಂಬ ಕುತೂಹಲ ತೆರೆದಿಟ್ಟರು.

ರಾಜ್ಯದಲ್ಲಿ ಇನ್ನೂ ಮಳೆಯಾಗುವ ಲಕ್ಷಣ ಹೆಚ್ಚಾಗಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಭೂಮಿ ಕಂಪಿಸಿ ಸಾವು ನೋವು-ರೋಗ ರುಜಿನ ಹೆಚ್ಚಾಗಲಿವೆ. ಜನಗಳಲ್ಲಿ ಭಯಭೀತಿ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದರು.

ಅಟಲ್ ಬಿಹಾರಿ ವಾಜಪೇಯಿ ರೀತಿಯಲ್ಲಿ ಮತ್ತೊಬ್ಬ ಗಣ್ಯ ನಾಯಕರು ನವೆಂಬರ್ ಒಳಗೆ ವಿಧಿವಶರಾಗಲಿದ್ದಾರೆ. ಆ ರೀತಿಯ ಸೂತಕ ಮುಂದುವರಿಯಲಿದೆ ಎಂದ ಸ್ವಾಮೀಜಿ, ಭ್ರಾತೃ ಬಲ ಹೆಚ್ಚಿತು ಎಂದು ಈ ಹಿಂದೆಯೇ ಹೇಳಿದ್ದೆ. ಅದರಂತೆ ಬೆಳಗಾವಿಯಲ್ಲೀಗ ಯಾರಿಂದ ಕಲಹ ನಡೆಯುತ್ತಿದೆ? ಎಂದು ಮರುಪ್ರಶ್ನೆ ಹಾಕಿದರು.

ಇನ್ನೂ ಅಂಥದೇ ಸಮಸ್ಯೆ ಭವಿಷ್ಯದಲ್ಲಿ ಸೃಷ್ಟಿಯಾಗಲಿದೆ. ನಾನು ಹೇಳಿದ್ದು ಯಾವುದೂ ಸುಳ್ಳಾಗಲ್ಲ. ಎಲ್ಲದಕ್ಕೂ ನವೆಂಬರ್ ವರೆಗೂ ಕಾದು ನೋಡಿ ಎಂದಷ್ಟೇ ಹೇಳಿದರು.

ದಂಡ ಬೀಸಲಿದೆ ಎಂದು ಭವಿಷ್ಯ ಹೇಳಿದ್ದೆ. ಅಂತೆಯೇ ತಮಿಳುನಾಡಿನಲ್ಲಿ ಕರುಣಾನಿಧಿ ಸತ್ತ ಕೂಡಲೇ ಎಐಡಿಎಂಕೆ ಬಣ ಬಲವಾಯಿತು. ಅಂತ್ಯಸಂಸ್ಕಾರ ಜಾಗದ ವಿವಾದ ಶುರುವಾಯಿತು.
ಹೈಕೋರ್ಟ್ ದಂಡ ಬೀಸಿದ ನಂತರ ಕೊನೆಗೂ ಅಂತ್ಯಸಂಸ್ಕಾರ ನೆರವೇರಿತು ಎಂದು ತಾವೇ ನುಡಿದಿದ್ದ ಭವಿಷ್ಯ ನೆನಪು ಮಾಡಿದರು.
ರಾಜ್ಯದಲ್ಲೂ ಅದೇ ರೀತಿಯ ದಂಡ ಬೀಸಲಿದೆ ಎಂದು ಎಚ್ಚರಿಸಿದ ಸ್ವಾಮೀಜಿ, ರಾಜ್ಯದಲ್ಲಿ ಅಧಿಕಾರಕ್ಕಾಗಿ ಇನ್ನೂ ಒಬ್ಬ ಅಣ್ಣ ಹುಟ್ಟಿಕೊಳ್ಳಲಿದ್ದಾನೆ. ಸ್ವಲ್ಪ ನಿಧಾನದಿಂದ ಕಾಯಿರಿ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದ ಭವಿಷ್ಯ ಹೇಗೆ ಬೇಕಾದ್ರೂ ಬದಲಾಗಬಹುದು ಎಂದರು.

Comments are closed.