ಕರ್ನಾಟಕ

ಬಿಜೆಪಿ ಸ್ನೇಹಿತರೇ ನನಗೆ ಮಾಹಿತಿದಾರರು: ಡಿ.ಕೆ.ಶಿವಕುಮಾರ್

Pinterest LinkedIn Tumblr


ನವದೆಹಲಿ: ಹಣಕಾಸು ಅಕ್ರಮದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದಿಂದ ಬಂಧನ ಭೀತಿ ಇದೆ ಎಂಬುದೆಲ್ಲ ಮಾಧ್ಯಮ
ಗಳ ಸೃಷ್ಟಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜತೆಗೆ, ನಾನು ನನ್ನೆಲ್ಲ ಕೆಲಸಗಳನ್ನು ಕಾನೂನು ಚೌಕಟ್ಟಿನಲ್ಲೇ ಮಾಡಿದ್ದೇನೆ, ಭೀತಿ ಅನ್ನುವುದು ನನ್ನ ಜಾಯ ಮಾನದಲ್ಲೇ ಇಲ್ಲ. ಯಾರೇ ಸರ್ಚ್ ವಾರಂಟ್ ಹೊರಡಿಸಲಿ ನನಗೆ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿ ಗಾರರೊಂದಿಗೆ ಸೋಮವಾರ ಮಾತನಾಡಿ, ಕಾನೂನು ಮುಂದಿಟ್ಟುಕೊಂಡು ತೊಂದರೆ ಕೊಡಬೇಕು ಎಂದಿದ್ದರೆ ನನ್ನದೇನೂ ಅಭ್ಯಂತರವಿಲ್ಲ. ಈ ವಿಚಾರದಲ್ಲಿ ಯಾರನ್ನೂ ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ ನಾನು ನನ್ನೆಲ್ಲ ಕೆಲಸಗಳನ್ನು ಕಾನೂನಿನ ಚೌಕಟ್ಟಿನಲ್ಲೇ ಮಾಡಿದ್ದೇನೆ. ಆದ್ದರಿಂದ ನನಗೆ ಯಾವುದೇ ಭಯ ಇಲ್ಲ ಎಂದು ಹೇಳಿದರು.

ಕ್ಷಿಪ್ರ ರಾಜಕೀಯ ಬೆಳವಣಿಗೆ: ಡಿಸಿಎಂ ಪ್ರವಾಸ ರದ್ದು

ನಾನು ಭಾನುವಾರ ದೆಹಲಿಗೆ ನನ್ನದೇ ಆದ ಕೆಲಸದ ಮೇಲೆ ಬಂದಿದ್ದೆ. ದೆಹಲಿಯಲ್ಲಿ ನನಗೆ ಸಹೋದರನ ಫ್ಲ್ಯಾಟ್ ಸೇರಿದಂತೆ ನನ್ನದೇ ಆದ ಮನೆಗಳಿವೆ. ಹಾಗೆಯೇ ಕರ್ನಾಟಕ ಭವನವೂ ಇದೆ. ನಾನು ಕರ್ನಾಟಕ ಭವನದಲ್ಲೇ ಉಳಿಯಬೇಕೆಂದೇನೂ ಇಲ್ಲ. ಅಧಿಕೃತ ಕೆಲಸವಿದ್ದಾಗ ಕರ್ನಾಟಕ ಭವನಕ್ಕೆ ಬರುತ್ತೇನೆ.

ಡಿಕೆಶಿ ಮೋದಿ ಭೇಟಿಯಾಗಲು ಕಾರಣವೇನು?

ನನಗೆ ಸಂಬಂಧಿಸಿದವರ 80-90 ಮಂದಿ ಮೇಲೆ ಐಟಿ ದಾಳಿಯಾಗಿದ್ದು, ನನ್ನಿಂದಾಗಿ ಅವರು ತೊಂದರೆ ಅನುಭವಿಸುತ್ತಿದ್ದಾರೆ. ನಾನು ಅವರಿಗೆ ನನ್ನ ನೈತಿಕ, ಕಾನೂನು ಬೆಂಬಲ ನೀಡಬೇಕಾಗುತ್ತದೆ ಎಂದ ಡಿಕೆಶಿ, ನಾನು ಕಾನೂನು ತಜ್ಞರನ್ನು ಭೇಟಿ ಆಗುವುದೇನಿದೆ? ರೋಗಿಯೇ ತಜ್ಞರಾಗಿರುತ್ತಾನೆ. ನಾವೂ ಕಾನೂನು ಮಾಡಿದ್ದೇವೆ, ನನಗೂ ಕಾನೂನು ಗೊತ್ತಿದೆ ಎಂದು ಟಾಂಗ್ ನೀಡಿದರು.

ಯಡಿಯೂರಪ್ಪ ಮತ್ತು ನನ್ನ ಸಂಬಂಧ ಚೆನ್ನಾಗಿದೆ: ಡಿಕೆಶಿ
ನಾನು ನಿಸ್ಸಂಶಯವಾಗಿಯೂ ಯಡಿಯೂರಪ್ಪ ಅವರ ಗೆಳೆಯ. ನಮ್ಮಿಬ್ಬರ ವೈಯಕ್ತಿಕ ಸಂಬಂಧ ಚೆನ್ನಾಗಿಯೇ ಇದೆ. ನನ್ನ ಸಹೋದರ ಡಿ.ಕೆ. ಸುರೇಶ್ ತನಗೆ ಸಿಕ್ಕ ಮಾಹಿತಿ ಆಧರಿಸಿ ಸುದ್ದಿಗೋಷ್ಠಿ ಮಾಡಿದ್ದಾನೆ. ಆತನ ಕ್ಷೇತ್ರದ ಕಾರ್ಯಕರ್ತರೊಬ್ಬರು ನೀಡಿದ ಪತ್ರವನ್ನು ಆಧರಿಸಿ ಹೇಳಿಕೆ ನೀಡಿದ್ದಾನೆ. ಆದರೆ ಯಡಿಯೂರಪ್ಪ ಆ ರೀತಿ ಪತ್ರ ಬರೆದಿದ್ದನ್ನು ತಳ್ಳಿಹಾಕಿದ್ದಾರೆ. ಆ ಪತ್ರ ಇಟ್ಟುಕೊಂಡು ಯಾಕೆ ಮಾಧ್ಯಮದ ಎದುರು ಹೋದೆ ಎಂದು ನಾನು ಸಹೋದರನನ್ನೂ ಪ್ರಶ್ನಿಸಿದ್ದೇನೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ಬಿಜೆಪಿ ಸ್ನೇಹಿತರು ಮಾಹಿತಿದಾರರು ನನಗೂ ಬಿಜೆಪಿಯಲ್ಲಿ ತುಂಬಾ ಸ್ನೇಹಿತರಿದ್ದಾರೆ. ಅವರೆಲ್ಲ ನನ್ನ ವೈಯಕ್ತಿಕ ಸ್ನೇಹಿತರು. ಅವರು ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನನಗೆ ಮಾಹಿತಿ ನೀಡುತ್ತಾರೆ.
– ಡಿ.ಕೆ. ಶಿವಕುಮಾರ್

Comments are closed.