ಕರ್ನಾಟಕ

ನಮ್ಮ ಪುತ್ರನ ಮದುವೆ ವಿಚಾರ ಕೇವಲ ವದಂತಿ: ಕುಮಾರಸ್ವಾಮಿ!

Pinterest LinkedIn Tumblr


ಬೆಂಗಳೂರು: ನಿಖಿಲ್​ ಮದುವೆ ಮಾತುಕತೆ ಸುದ್ದಿ ಕೇವಲ ವದಂತಿ ಅಷ್ಟೇ. ನಾವು ವಿಜಯವಾಡಕ್ಕೆ ಬಂದಿದ್ದು ದೇವರ ದರ್ಶನಕ್ಕೆ. ನಿಖಿಲ್ ಮದುವೆ ಮಾತುಕತೆಗೆ ನಾವು ಬಂದಿಲ್ಲ ಎಂದು ವಿಜಯವಾಡದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ಇಂದು ತಮ್ಮ ಮಗ ನಿಖಿಲ್ ಕುಮಾರಸ್ವಾಮಿಗೆ ಹುಡುಗಿ ನೋಡಲು ಕುಟುಂಬ ಸಮೇತರಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿತ್ತು. ವಿಜಯವಾಡ ಮೂಲದ ಪ್ರಾಫಿಟ್​ ಶೂ ಕಂಪನಿ ಮಾಲೀಕರಾದ ಕೋಟೇಶ್ವರ್​ ರಾವ್​ ಮಗಳನ್ನು ತಮ್ಮ ಮನೆಯ ಸೊಸೆಯಾಗಿ ತರಲು ಎಚ್​ಡಿಕೆ ದಂಪತಿ ಉದ್ಯಮಿ ಕೋಟೇಶ್ವರ ರಾವ್​ ಮನೆಗೆ ತೆರಳಿ ವಿವಾಹ ಮಾತುಕತೆ ನಡೆಸಿದ್ದರು ಎನ್ನಲಾಗಿತ್ತು. ಉದ್ಯಮಿ ಕೋಟೇಶ್ವರ್​ ಮಗಳು ಸಹಜ ಜೊತೆ ನಿಖಿಲ್​ ಮದುವೆಯಾಗುತ್ತೆ ಎಂಬ ಮಾತುಗಳು ಕೇಳಿಬಂದಿದ್ದವು. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಈ ಮಾತುಕತೆಯ ಮಧ್ಯಸ್ಥಿಕೆ ವಹಿಸಿದ್ದರು ಎಂದೂ ಸಹ ಹೇಳಲಾಗಿತ್ತು. ಈ ಬಗ್ಗೆ ಮಾಧ್ಯಮಗಳು ಸಹ ವರದಿ ಮಾಡಿದ್ದವು.

ಆದರೆ ಎಚ್​.ಡಿ.ಕೆ.ದಂಪತಿ ಈ ಖಾಸಗಿ ವಿಷಯವನ್ನು ಬಹಿರಂಗಪಡಿಸಲು ಹಿಂದೇಟು ಹಾಕಿದ್ದಾರೆ. ನಿಖಿಲ್​ ಮದುವೆ ಮಾತುಕತೆ ಸುದ್ದಿ ಕೇವಲ ವದಂತಿ ಅಷ್ಟೇ. ನಾವು ವಿಜಯವಾಡಕ್ಕೆ ಬಂದಿದ್ದು ದೇವರ ದರ್ಶನಕ್ಕೆ. ನಿಖಿಲ್​ ಮದುವೆ ಮಾತುಕತೆಗೆ ಬಂದಿಲ್ಲ ಎಂದು ಇದೀಗ ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್​​.ಡಿ.ದೇವೇಗೌಡರು, ಮದುದೆ ಖಾಸಗಿ ವಿಚಾರ. ಎಲ್ಲರಿಗೂ ಒಪ್ಪಿಗೆಯಾದರೆ ಮದುವೆ ಮಾಡೋಣ ಎಂದು ನಗುತ್ತಾ ವಿಷಯ ಮರೆಸಿದ್ದರು.

ಕುಮಾರಸ್ವಾಮಿ ಕುಟುಂಬದವರು ದೇವರ ದರ್ಶನಕ್ಕಾಗಿ ಬಂದಿದ್ದಾರೆ. ಅವರ ಹೆಂಡತಿ ಅನಿತಾ ಕುಮಾರಸ್ವಾಮಿ ಕೂಡ ಬಂದಿದ್ದಾರೆ. ಕೆಲಸದ ನಿಮಿತ್ತ ನಾನು ತಿರುಪತಿಗೆ ತೆರಳುತ್ತಿದ್ದೆ. ಆದರೆ ಕುಮಾರಸ್ವಾಮಿಯವರನ್ನು ಮಾತನಾಡಿಸುವ ಕಾರಣಕ್ಕೆ ಉಳಿದುಕೊಂಡೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ನಿನ್ನೆಯಿಂದ ಸಿಎಂ ಮಗ ನಿಖಿಲ್​ಗೆ ಹುಡುಗಿ ನೋಡಲು ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದಾರೆ ಎಂದು ಸುದ್ದಿ ಹರಿದಾಡಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಇಂದು ಗೌಡರ ಕುಟುಂಬ ಆಂಧ್ರಪ್ರದೇಶಕ್ಕೆ ತೆರಳಿದ್ದರು. ವಿಜಯವಾಡದ ಕನಕದುರ್ಗಮ್ಮ ದೇವಾಲಯಕ್ಕೂ ಸಹ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು.

ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ, ಗೌಡರ ಕುಟುಂಬ ನಿಖಿಲ್​ ಮದುವೆ ವಿಚಾರದಲ್ಲಿ ಗುಟ್ಟು ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು . ಈ ಹಿಂದೆ ನಿಖಿಲ್​ ಕುಮಾರಸ್ವಾಮಿಗೆ ನಿಶ್ಚಿತಾರ್ಥವಾಗಿ, ಕಾರಣಾಂತರಗಳಿಂದ ಮುರಿದು ಬಿದ್ದಿತ್ತು.

Comments are closed.