ರಾಷ್ಟ್ರೀಯ

ಹಣ ದೋಚಲು ಹೋಟೆಲ್‌ಗೆ ನುಗ್ಗಿದ ಕಳ್ಳರು ಬಿರಿಯಾನಿ ತಿಂದು ಹೋದರು

Pinterest LinkedIn Tumblr


ಹೊಸದಿಲ್ಲಿ: ಹಣ ದೋಚಲು ಹೋಟೆಲ್‌ಗೆ ನುಗ್ಗಿದ ಕಳ್ಳರು ದುಡ್ಡು ಸಿಗದ್ದಕ್ಕೆ ಬಿರಿಯಾನಿ ತಿಂದು ಮರಳಿದ ಸ್ವಾರಸ್ಯಕರ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ತಿಂದು ಮರಳುವಾಗ ಅಲ್ಲಿಂದ ಲ್ಯಾಪ್‌ಟಾಪ್ ಸಹ ಎತ್ತಿಕೊಂಡು ಹೋಗಿದ್ದರಿಂದ ಕಳ್ಳರೀಗ ಜೈಲು ಪಾಲಾಗಿದ್ದಾರೆ.

ಬಿರಿಯಾನಿ ಪ್ರಿಯ ಗೆಳೆಯರು

ಕಿಲಾಡಿ ಗೆಳೆಯರಾದ ಚೋಟು ಮತ್ತು ರಾಜು ಆಗಾಗ ಸರಿತಾ ವಿಹಾರ್‌ G- ಬ್ಲಾಕ್‌ನಲ್ಲಿರುವ ದೀಜ್ ಹೋಟೆಲ್‌ಗೆ ಬಿರಿಯಾನಿ ತಿನ್ನಲು ಬರುತ್ತಿದ್ದರು. ಪ್ರತಿ ಬಾರಿ ಬಂದು ಬಿರಿಯಾನಿ ಸವಿಯುತಿದ್ದಾಗ ಸಹ ಅವರ ಕಣ್ಣು ಕ್ಯಾಶ್ ಕೌಂಟರ್ ಮೇಲೆಯೇ ಕಣ್ಣಿರುತ್ತಿತ್ತು. ಅದನ್ನು ಯಾವಾಗ ದೋಚುವುದು ಎಂದವರು ಹೊಂಚು ಹಾಕುತ್ತಿದ್ದರು.

ಹಣ ಸಿಗದಿದ್ದಾಗ ಬಿರಿಯಾನಿ ತಿನ್ನಲು ಕುಳಿತರು

ಮಂಗಳವಾರದ ರಾತ್ರಿ ಮಾಸ್ಕ್ ಹಾಕಿಕೊಂಡು ಹೋಟೆಲ್‌ಗೆ ನುಗ್ಗಿಯೇ ಬಿಟ್ಟರು. ಆದರೆ ಎಷ್ಟು ತಡಕಾಡಿದರೂ ಅವರಿಗೆ ಹಣ ಸಿಗಲೇ ಇಲ್ಲ. ಬಂದಿದ್ದು ವ್ಯರ್ಥವಾಯಿತೆಂದು ಬೇಸತ್ತ ಇಬ್ಬರಿಗೆ ಬಿರಿಯಾನಿ ನೆನಪು ಬಂತು. ಪಾತ್ರೆಯಲ್ಲಿ ಅಳಿದುಳಿದಿದ್ದ ಬಿರಯಾನಿ ಹಾಕಿಕೊಂಡು ರೈತ ಮತ್ತು ಗ್ರೇವಿ ಜತೆ ಹೊಟ್ಟೆ ಬಿರಿಯುವಂತೆ ತಿಂದು ಅಲ್ಲಿಂದ ಮರಳುವಾಗ ಕೌಂಟರ್‌ನಲ್ಲಿದ್ದ ಲ್ಯಾಪ್‌ಟಾಪ್ ಕಾಣಿಸಿದೆ. ಅದನ್ನೆತ್ತಿಕೊಂಡಿದ್ದೇ ತಮಗೆ ಮುಳುವಾಗಲಿದೆ ಎಂಬ ಕಲ್ಪನೆ ಮಾತ್ರ ಅವರಿಗಿರಲಿಲ್ಲ.

ಸಿಸಿಟಿವಿಯಲ್ಲಿ ಅವರ ಕೃತ್ಯಗಳೆಲ್ಲವೂ ಸೆರೆಯಾಗಿತ್ತು. ಆದರೆ ಮುಖ ಮುಚ್ಚಿದ್ದರಿಂದ ಗುರುತು ಪತ್ತೆಯಾಗುವುದು ಕಷ್ಟವಾಗಿತ್ತು. ಆದರೆ ಕದ್ದ ಲ್ಯಾಪ್‌ಟಾಪ್ ಅವರು ಸುಲಭವಾಗಿ ಪೊಲೀಸರ ಬಲೆಗೆ ಬೀಳಲು ಕಾರಣವಾಯಿತು.

ಬುಧವಾರ ದಿನ ತಾವು ಕದ್ದ ಲ್ಯಾಪ್‌ಟಾಪ್‌ನ್ನು ಸರಿತಾ ನಗರ ಪಾರ್ಕ್ ಬಳಿ ಮಾರಲು ಯತ್ನಿಸುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಬಿರಿಯಾನಿ ತಿನ್ನಲು ಹೋಗಿ ಜೈಲಲ್ಲಿ ಒಣ ರೊಟ್ಟಿ ಮುರಿಯುವುದು ಅವರಿಗೀಗ ಅನಿವಾರ್ಯವಾದಂತಾಗಿದೆ.

Comments are closed.