ಕರ್ನಾಟಕ

ಪ್ರವಾಹ ಪೀಡಿತರ ಮೊರೆ ಕೇಳದ ಕುಮಾರಸ್ವಾಮಿ ಎಲ್ಲಿದ್ದಾರೆ …?

Pinterest LinkedIn Tumblr

ಮೈಸೂರು: ವಿಧಾನಸೌಧದೆದುರು ‘ಸರಕಾರಿ ಕೆಲಸ ದೇವರ ಕೆಲಸ’ ಘೋಷವಾಕ್ಯದೊಂದಿಗೆ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೇಗುಲಗಳಿಗೆ ಭೇಟಿ ನೀಡುವ ಕಾರ್ಯವನ್ನು ಮುಂದುವರಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ.

ಭೀಕರ ಮಳೆಯಿಂದ ದಕ್ಷಿಣ ಕನ್ನಡ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಆದರೆ, ರಾಜ್ಯದ ಮುಖ್ಯಮಂತ್ರಿಗಳು ಅಲ್ಲಿನ ದೇವಾಲಯಗಳಿಗೆ ಭೇಟಿ ನೀಡಿದ್ದಾರೆಯೇ ಹೊರತು, ಅದೇ ಭಾಗದ ಜನರ ಕಷ್ಟಕಾರ್ಪಣ್ಯಗಳನ್ನು ಆಲಿಸುವ, ತಕ್ಷಣ ಸ್ಪಂದಿಸುವ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ಷೇಪಗಳು ಕೇಳಿ ಬರುತ್ತಿವೆ. ಬದಲಾಗಿ, ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಎಲ್ಲ ಘಾಟಿ ಮಾರ್ಗಗಳಲ್ಲಿ ಪ್ರವಾಹ, ಭೂಕುಸಿತಗಳಿಂದಾಗಿ ಸಂಚಾರ ವ್ಯವಸ್ಥೆಯೇ ಬುಡಮೇಲಾಗಿತ್ತು. ಆದರೆ, ವಾಹನಗಳು ಸಂಚರಿಸುತ್ತಿದ್ದ ಚಾರ್ಮಾಡಿ ಘಾಟ್ ರಸ್ತೆಯನ್ನೇ ಮುಖ್ಯಮಂತ್ರಿ ಪ್ರಯಾಣಕ್ಕೋಸ್ಕರ ಬಂದ್ ಮಾಡಿರುವುದು ನಾಗರಿಕರ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.

ಕರಾವಳಿ ಕರ್ನಾಟಕ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿದೆ. ಈ ಬಗ್ಗೆ ಸರಣಿ ವರದಿಗಳು ಪ್ರಕಟವಾಗುತ್ತಿವೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಈ ಭಾಗದ ಜನರು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಜನರ ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿಯವರು ಯಾವುದೇ ಕ್ರಮ ಕೈಗೊಂಡಿಲ್ಲದಿರುವುದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕುಟುಂಬ ಸಮೇತರಾಗಿ ಸೋಮವಾರ ರಾತ್ರಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಿಎಂ ಕುಟುಂಬಸ್ಥರು ಚಾರ್ಮಾಡಿ ಘಾಟಿ ಮೂಲಕ ಹಾದು ಹೋಗುತ್ತಾರೆಂಬ ಕಾರಣಕ್ಕೆ ಪೊಲೀಸರು ಮಂಗಳವಾರ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಸುಮಾರು 6 ಗಂಟೆಗಳ ತಡೆದು ನಿಲ್ಲಿಸಲಾಗಿತ್ತು.

ಕೊನೆಗೂ 5 ಜಿಲ್ಲೆಯಲ್ಲಿ ಹೈ-ಅಲರ್ಟ್ ಘೋಷಿಸಿದ ಸಿಎಂ

ಕಳೆದೊಂದು ವಾರದಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿದ್ದು, ಕೊಡಗು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೊನೆಗೂ ಹೈ ಅಲರ್ಟ್ ಘೋಷಿಸಿರುವ ಸಿಎಂ, ಪ್ರವಾಸ ಸ್ಥಿತಿ ನಿಭಾಯಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Comments are closed.