ಕರ್ನಾಟಕ

ಈತ ಟ್ರಾಫಿಕ್‌ ಯಮ ವೇಷಧಾರಿಯಾಗಿದ್ದು ಏಕೆ?

Pinterest LinkedIn Tumblr


ಬೆಂಗಳೂರು: ಯಾರೂ ಇಷ್ಟಪಡದ ಯಮನ ವೇಷ ಧರಿಸಿಕೊಂಡು ಟ್ರಾಫಿಕ್‌ ನಿಯಮ ಉಲ್ಲಂಘಿಸುವವರನ್ನು ತಡೆದು ಆ ಬಗ್ಗೆ ಜಾಗೃತಿ ಹುಟ್ಟಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಲು ವೀರೇಶ್‌ ಮುತ್ತಿನಮಠ ಅವರನ್ನು ಪ್ರೇರೇಪಿಸಿದ್ದು ಅವರ ಸೋದರನ ಸಾವು.

ಜನರು ಮಾತ್ರ ಇದು ಟ್ರಾಫಿಕ್‌ ಪೊಲೀಸ್‌ ಇಲಾಖೆ ಯಮನ ಪಾತ್ರಧಾರಿಯನ್ನು ನಿಯೋಜಿಸಿರುವುದಾಗಿ ಭಾವಿಸಿದ್ದಾರೆ. ಆದರೆ ಇದು ವೀರೇಶ್‌ ಅವರು ಸ್ವಯಂ ಸೇವೆಯಾಗಿ ಸಮಾಜಕ್ಕೆ ನೀಡುತ್ತಿರುವ ಕೊಡುಗೆ. ಇದಕ್ಕಾಗಿ ಅವರೂ ಒಂದೇ ಒಂದು ಪೈಸೆ ಕೂಡ ಪಡೆದುಕೊಳ್ಳುತ್ತಿಲ್ಲ.

2017ರ ಜೂನ್‌ 21ರಂದು ವೀರೇಶ್‌ ಅವರ ಸೋದರ ಮರಿಸ್ವಾಮಿ ದ್ವಿಚಕ್ರ ವಾಹನ ಅಪಘಾತದಿಂದ ತಲೆಗೆ ಗಂಭೀರ ಏಟು ಬಿದ್ದು, ಜೂನ್ 23ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬೈಕ್‌ನಲ್ಲಿ ಹಿಂಬದಿ ಸವಾರ ಆಗಿದ್ದ ಅವರು ತಲೆಗೆ ಹೆಲ್ಮೆಟ್‌ ಧರಿಸಿರಲಿಲ್ಲ. ಹೆಲ್ಮೆಟ್‌ ಧರಿಸಿದ್ದಿದ್ದರೆ ಅವರು ಹೀಗೆ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದರು. ಈ ಘಟನೆಯಿಂದ ವಾಹನ ಚಲಾಯಿಸುವಾಗ ಹಿಂಬದಿಯವರು ಮತ್ತು ಚಲಾಯಿಸುವವರು ಹೆಲ್ಮೆಟ್‌ ಧರಿಸಬೇಕಾದ ಅಗತ್ಯವನ್ನು ವೀರೇಶ್‌ ಮನಗಂಡರು.

ವೀರೇಶ್‌ ಮುತ್ತಿನಮಠ
ಬೆಂಗಳೂರಿನ ರಸ್ತೆಗಳಲ್ಲಿ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನದಲ್ಲಿ ಓಡಾಡುವವರ ಸಂಖ್ಯೆ ನೋಡಿ ಆತಂಕಗೊಂಡ ವೀರೇಶ್‌ ಪ್ರಾಣ ರಕ್ಷಣೆಗಾಗಿ ಯಮ ವೇಷಧಾರಿಯಾಗಿ ಸವಾರರಿಗೆ ಹೆಲ್ಮೆಟ್‌ ಧರಿಸಿರುವಂತೆ ಮನವೊಲಿಸುವ ಕೆಲಸದಲ್ಲಿ ತೊಡಗಿಸಿಕೊಂಡು ರಸ್ತೆಗಳಲ್ಲಿ ಸುತ್ತುತ್ತಿದ್ದಾರೆ.

ಆದರೆ ಬಹಳಷ್ಟು ಹಿಂಬದಿ ಸವಾರರು ಹೆಲ್ಮೆಟ್‌ ಧರಿಸಬೇಕೆಂಬ ಸಲಹೆಯನ್ನು ಗಂ ಭೀರವಾಗಿ ಪರಿಗಣಿಸುವುದೇ ಇಲ್ಲ. ಅದರಿಂದ ಏನೂ ಪ್ರಯೋಜವಿಲ್ಲ ಎಂದೇ ವಾದಿಸುತ್ತಾರೆ. ಆದರೂ ಅವರ ಮನವೊಲಿಸಿ ಹೆಲ್ಮೆಟ್‌ ಧರಿಸಿದ್ದರೆ ಆಗುವ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸುತ್ತಿದ್ದೇನೆ ಎಂದು ವೀರೇಶ್‌ ಹೇಳುತ್ತಾರೆ.

ಬೆಂಗಳೂರು ಟ್ರಾಫಿಕ್‌ ಪೊಲೀಸರು ಇಂಥದ್ದೊಂದು ಕಾರ್ಯಕ್ರಮದ ಮೂಲಕ ಜಾಗೃತಿ ಹುಟ್ಟಿಸುವ ಕಾರ್ಯಕ್ರಮ ಹಾಕಿಕೊಂಡಿದ್ದರೂ, ಪ್ರಾಣ ತೆಗೆಯುವ ದೇವರಾದ ಯಮನ ವೇ‍ಷಧಾರಿಯಾಗಲು ಯಾರೂ ಒಪ್ಪುತ್ತಿರಲಿಲ್ಲ. ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನ್‌ನಲ್ಲಿ ಪೊಲೀಸರ ಸಂಪರ್ಕಕ್ಕೆ ಬಂದ ವೀರೇಶ್‌ ಪ್ರಾಣ ರಕ್ಷಣೆಗಾಗಿ ಯಮ ವೇಷಧಾರಿಯಾಗಲು ಸಮ್ಮತಿಸಿದರು. ಆದರೆ ಸ್ನೇಹಿತರು ಈ ವೇಷ ಧರಿಸುವುದು ಬೇಡ ಎಂದು ಹೇಳಿದರು, ಆದರೆ ವೀರೇಶ್‌ ತನ್ನ ನಿರ್ಧಾರ ಬದಲಿಸದೆ ತನ್ನ ಕೆಲಸ ಮುಂದುವರಿಸಿದರು.

ಟ್ರಾಫಿಕ್‌ ನಿಯಮ ಉಲ್ಲಂಘಿಸಿದವರನ್ನು ತಡೆದ ಯಮ ವೇ‍ಷಧಾರಿ

ವೀರೇಶ್‌ ಅವರ ಈ ಸೇವೆ ಫಲಪ್ರದವಾಗಿರುವುದರಿಂದ ಪೊಲೀಸರು ನಗರದ ಇತರ ಭಾಗಗಳಿಗೂ ವಿಸ್ತರಿಸಲು ಒಲವು ತೋರಿದ್ದಾರೆ. ವೀರೇಶ್‌ ಸಂಜೆಯವರೆಗೆ ಈ ಕಾರ್ಯದಲ್ಲಿ ತೊಡಗಿಕೊಂಡು ಸೋದರ ಮೃತಪಟ್ಟು ಒಂದು ವರ್ಷವಾದ ಹಿನ್ನೆಲೆಯಲ್ಲಿ ನಡೆಸಬೇಕಿದ್ದ ವಿಧಿವಿಧಾನಗಳನ್ನು ಪೂರೈಸಲು ರಾತ್ರಿ ಬಾಗಲಕೋಟದ ಬಸ್‌ ಹತ್ತಿದ್ದರು. ಅಲ್ಲಿನ ಕೆಲಸ ಮುಗಿಸಿ ಮತ್ತೆ ಬೆಂಗಳೂರಿಗೆ ವಾಪಸಾಗಿ ಯಮ ವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವೀರೇಶ್‌ ಅವರು ತ್ಯಾಗರಾಜನಗರದಲ್ಲಿ ವಾಸವಿದ್ದು, ತಂದೆ ತರಕಾರಿ ವ್ಯಾಪಾರಿ. ಕುಟುಂಬದ ಜವಾಬ್ದಾರಿ ಇದ್ದ ಕಾರಣ ವೀರೇಶ್‌ ಓದು ಅರ್ಧಕ್ಕೆ ಬಿಟ್ಟಿದ್ದರು. ಕಥೆಗಾರ, ನಾಟಕ ನಿರ್ದೇಶಕರಾಗಿ ಕೆಲಸ ಮಾಡಿರುವ ವೀರೇಶ್‌ ಕನ್ನಡದ ಎರಡು ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

Comments are closed.