ಕರ್ನಾಟಕ

ಖಾತಾ ಮಾಡಿಸಲು ಲಂಚ: ಕಂದಾಯ ನಿರೀಕ್ಷಕನಿಗೆ 2 ವರ್ಷ ಜೈಲು ಶಿಕ್ಷೆ

Pinterest LinkedIn Tumblr


ಬೆಂಗಳೂರು: ಖಾತಾ ಮಾಡಿಕೊಡಲು 50 ಸಾವಿರ ರೂ. ಲಂಚ ಪಡೆದ ಕಂದಾಯ ನಿರೀಕ್ಷಕ ಎಸ್‌.ರವಿಕುಮಾರ್‌ ಅವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್‌ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರವಿಕುಮಾರ್‌, ಕೋರ್ಟ್‌ ಡಿಕ್ರಿ ಮೂಲಕ ಇತ್ಯರ್ಥಗೊಂಡಿದ್ದ ಆಸ್ತಿ ವ್ಯಾಜ್ಯ ಪ್ರಕರಣದಲ್ಲಿ ಮೂವರು ವ್ಯಕ್ತಿಗಳ ಹೆಸರಿಗೆ ಆಸ್ತಿಗೆ ಖಾತೆಯನ್ನು ಮಾಡಿಕೊಡಲು ಕೃಷ್ಣಪ್ಪ ಎಂಬುವರಿಂದ 50 ಸಾವಿರ ರೂ. ಲಂಚ ಕೇಳಿದ್ದರು. ಲಂಚ ನೀಡಲಿಚ್ಛಿಸದ ಕೃಷ್ಣಪ್ಪ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

2011ರ ನ. 29ರಂದು ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇಗುಲದ ಬಳಿ ಹಣ ತರುವಂತೆ ಕೃಷ್ಣಪ್ಪಗೆ ಸೂಚನೆ ನೀಡಿದ್ದರು. ಅದರಂತೆ 50 ಸಾವಿರ ರೂ. ಲಂಚದ ಹಣವನ್ನು ಕೃಷ್ಣಪ್ಪ ಅವರಿಂದ ಸ್ವೀಕರಿಸಿದ ರವಿಕುಮಾರ್‌ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ಪೂರ್ಣಗೊಂಡು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರವಿಕುಮಾರ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಸಚಿನ್‌ ಕೌಶಿಕ್‌ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಮೋಹನ್‌ ಟಂಕಸಾಲಿ ವಾದ ಮಂಡಿಸಿದ್ದರು.

ಬಿಟ್ಟು ಬಿಡಿ ಎಂದಿದ್ದ ಅಧಿಕಾರಿ: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ರವಿಕುಮಾರ್‌, ”ನನ್ನನ್ನು ಬಿಟ್ಟು ಬಿಡಿ, ನನ್ನ ಜೀವನ ಹಾಳಾಗುತ್ತದೆ. ಇದೇ ತಿಂಗಳಲ್ಲಿ ನನಗೆ ಮುಂಬಡ್ತಿ ಸಿಗಬೇಕಿದೆ ಎಂದು ಗೋಳಾಡಿದ್ದರು” ಎಂದು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.

Comments are closed.