ಕರ್ನಾಟಕ

ಬಿಜೆಪಿ ಬಹುಮತಕ್ಕೆ ಬೇಕಾದ ಅಗತ್ಯ ಸಂಖ್ಯೆಯನ್ನು ಪಡೆಯದಿರಲು ಪಕ್ಷದ ಸ್ವಯಂಕೃತ ಅಪರಾಧವೇ ಕಾರಣ: ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಬೇಕಾದ ಅಗತ್ಯ ಸಂಖ್ಯೆಯನ್ನು ಪಡೆಯದಿರಲು ಪಕ್ಷದ ಸ್ವಯಂಕೃತ ಅಪರಾಧವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ವಿಷಾದ ವ್ಯಕ್ತಪಡಿಸಿದ್ದಾರೆ.

ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಬಿಎಸ್ ವೈ, ವಿಧಾನಸಭೆ ಚುವಾವಣೆ ವೇಳೆ ಮೋದಿ ಅಲೆ ಇದ್ದರೂ ನಾವು ಕನಿಷ್ಠ 135 ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಮಿತ್ ಶಾ, ಬೇರೆ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ರಾಜ್ಯ ಪ್ರಚಾರ ಮಾಡಿದರು. ಆದರೂ ನಾವು 104 ಸ್ಥಾನ ಗೆದ್ದು ಪ್ರತಿಪಕ್ಷದಲ್ಲಿ ಕುತುಕೊಳ್ಳುವ ಪರಿಸ್ಥಿತಿ ಬಂದಿದೆ. ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು. ನಮ್ಮ 104 ಶಾಸಕರು ಮತ್ತು ಎಂಟು ಜನ ಪರಿಷತ್ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ನಾವು ನಲ್ವತ್ತು ಸ್ಥಾನಗಳಿಂದ 104 ಸ್ಥಾನ ತಲುಪಿದ್ದೇವೆ. ಕಾಂಗ್ರೆಸ್ 123 ರಿಂದ 80ಕ್ಕೆ ಕುಸಿದಿದೆ. ಅಲ್ಲದೆ 17 ಸಚಿವರು ಹೀನಾಯ ಸೋಲು ಅನುಭವಿಸಿದ್ದಾರೆ ಎಂದರು.

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕೇವಲ 1600 ಮತಗಳಿಂದ ಮಾತ್ರ ಗೆದ್ದಿದ್ದಾರೆ. ಆದರೆ ನಾವು 113 ಸ್ಥಾನ ಗೆಲ್ಲಲಿಕ್ಕಾಗಲಿಲ್ಲ ಎಂಬ ನೋವಿದೆ ಎಂದರು.

ಈ ದೇಶದಲ್ಲಿ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದಿದ್ದಾಗ ಸಿಂಗಲ್ ಲಾರ್ಜೆಸ್ಟ್‌ ಪಾರ್ಟಿಗೆ ಅವಕಾಶ ಕೊಡುವುದು ನಮಗೆಲ್ಲ ಗೊತ್ತು. ಸುಪ್ರೀಂಕೋರ್ಟ್ ನಲ್ಲಿ ಮಧ್ಯರಾತ್ರಿ ಈ ಕುರಿತು ಚರ್ಚೆ ಆಯಿತು. ದೇಶದ ಇತಿಹಾಸದಲ್ಲಿ 15 ದಿನ ಬಹುಮತ ಸಾಬೀತಿಗೆ ಅವಕಾಶ ಇದ್ದರೂ 24 ಗಂಟೆ ಅವಕಾಶ ಕೊಡುವ ರೀತಿ ಮಾಡಿದ್ದನ್ನು ನಾನು ಈವರೆಗೂ ಕಂಡಿರಲಿಲ್ಲ ಎಂದು ಪರೋಕ್ಷವಾಗಿ ಸರ್ವೋಚ್ಚ ನ್ಯಾಯಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Comments are closed.