ಕರ್ನಾಟಕ

ಪತ್ನಿಯ ಎದೆಗೆ ಗುಂಡಿಕ್ಕಿ ಕೊಂದು ಪರಾರಿಯಾದ ಉದ್ಯಮಿ!

Pinterest LinkedIn Tumblr


ಬೆಂಗಳೂರು: ಗುರುವಾರ ರಾತ್ರಿ ಜಯನಗರದ ನಾಲ್ಕನೇ ಬ್ಲಾಕ್‌ನ ನಿವಾಸದಲ್ಲಿ ಪತ್ನಿಯ ಎದೆಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದು ಮಕ್ಕಳಿಬ್ಬರೊಂದಿಗೆ ಪರಾರಿಯಾಗಿದ್ದ ಉದ್ಯಮಿ ಶುಕ್ರವಾರ ಬೆಳಗ್ಗೆ ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಮಕ್ಕಳಿಬ್ಬರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಬೆಚ್ಚಿ ಬೀಳಿಸುವ ನಡೆದಿದೆ. ಪೊಲೀಸರು ಸ್ಥಳದಲ್ಲೇ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಣೇಶ್‌ ಎಂಬ ರಿಯಲ್‌ ಎಸ್ಟೇಟ್‌ ಉದ್ಯಮಿ ಪತ್ನಿ ಸಹನಾರೊಂದಿಗೆ ಜಗಳವಾಡಿ ಮನೆಯಲ್ಲಿದ್ದ ರಿವಾಲ್ವರ್‌ನಿಂದ ಗುಂಡಿಕ್ಕಿ ಹತ್ಯೆಗೈದು ಇಬ್ಬರು ಮಕ್ಕಳ ಸಮೇತ ಪರಾರಿಯಾಗಿದ್ದ.

ಹಣಕಾಸು ವಿಚಾರಕ್ಕೆ ಸಂಬಂಧಿಸಿ ಗಂಡ ಹೆಂಡತಿ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಜಯನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಗಣೇಶ್‌ ಬಂಧನಕ್ಕಾಗಿ ಕಾರ್ಯಾಚರಣೆಗಿಳಿದಿದ್ದರು.

ಗಣೇಶ್‌ ಮಕ್ಕಳೊಂದಿಗೆ ಬಿಡದಿ ಬಳಿಯ ಬನಗಿರಿ ಯಲ್ಲಿ ಇರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಮಕ್ಕಳ ಮೇಲೆ ಗುಂಡು ಹಾರಿಸಿ ರಾಕ್ಷಸನಂತೆ ವರ್ತಿಸಿದ್ದಾನೆ.

ಹೆಣ್ಣು ಮಗುವಿನ ಹೊಟ್ಟೆ ಭಾಗಕ್ಕೆ ಗುಂಡು ತಗುಲಿದ್ದು, ಗಂಡು ಮಗುವಿನ ತೊಡೆ ಮತ್ತು ಕೈ ಗೆ ಗುಂಡು ತಾಗಿದೆ, ಇಬ್ಬರೂ ಪ್ರಾಣಾಪಾಯಿದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಕೋಣನಕುಂಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರು ಸ್ಥಳದಲ್ಲಿ ರಿವಾಲ್ವರ್‌ ಸಹಿತ ಗಣೇಶ್‌ನನ್ನು ವಶಕ್ಕೆ ಪಡೆದಿದ್ದು , ವಿಚಾರಣೆ ನಡೆಸುತ್ತಿದ್ದಾರೆ.

ನಾನು ಅಪಾರ ಸಾಲದ ಸುಳಿಯಲ್ಲಿ ಸಿಲುಕಿದ್ದೆ, ಆಸ್ತಿ ಮಾರಾಟ ಮಾಡಿ ಸಾಲ ಮುಕ್ತನಾಗಲು ಮುಂದಾಗಿದ್ದೆ . ಆದರೆ ಹೆಂಡತಿ ಸಹನಾ ಅದಕ್ಕೆ ಅಡ್ಡಿಯಾಗಿದ್ದಳು, ಹೀಗಾಗಿ ಹೆಂಡತಿಯನ್ನು ಕೊಲೆಗೈದೆ , ಮಕ್ಕಳನ್ನೂ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತಿರ್ಮಾನಿಸಿದ್ದೆ ಎಂದು ಪೊಲೀಸರ ಬಳಿ ಹೇಳಿಕೊಂಡಿರುವ ಬಗ್ಗೆ ವರದಿಯಾಗಿದೆ.

ಬಂಧಿತ ಗಣೇಶ್‌ ರೆಸಾರ್ಟ್‌ವೊಂದರ ಮಾಲೀಕನಾಗಿದ್ದು ಮೂರ್‍ನಾಲ್ಕು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು , ಆಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದ ಎಂದು ತಿಳಿದು ಬಂದಿದೆ.

Comments are closed.