ಕರ್ನಾಟಕ

ಸಮ್ಮಿಶ್ರ ಸರ್ಕಾರದ ಆಯುಷ್ಯದ ಕುರಿತು ಕುಮಾರಸ್ವಾಮಿ ಹೇಳಿದ್ದು…..

Pinterest LinkedIn Tumblr


ಬೆಂಗಳೂರು: ರೈತರ ಸಾಲ ಯಾವ ರೀತಿ ಮನ್ನಾ ಮಾಡಬೇಕು ಎಂಬ ಬಗ್ಗೆ ಈಗಾಗಲೇ ಬ್ಲೂಪ್ರಿಂಟ್ ರೆಡಿ ಇದೆ. ಸಾಲಮನ್ನಾದ ಕ್ರೆಡಿಟ್ ಕಾಂಗ್ರೆಸ್ ಗೂ ಸಿಗಲಿದೆ. ಈ ರಾಜ್ಯದ ಆರೂವರೆ ಕೋಟಿ ಜನರನ್ನು ರಕ್ಷಿಸುವ ಸ್ಥಾನದಲ್ಲಿ ನಾನಿದ್ದೇನೆ ಎಂದು ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬುಧವಾರ ವಿಧಾನಸೌಧದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಹಾಗೂ ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧ ಸಮ್ಮೇಳನ ಹಾಲ್ ನಲ್ಲಿ ಮೊದಲ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ನಾನು ಜಾತಿ ಹಿಡಿದುಕೊಂಡು ರಾಜಕಾರಣ ಮಾಡಲ್ಲ. ಎಲ್ಲಾ ಸಮಾಜದವರು ಶಾಂತಿಯಿಂದ ಸಮಾಜದಲ್ಲಿ ಬದುಕುವಂತಾಗಬೇಕು. ರಾಜ್ಯ ರಸಋಷಿ ಕುವೆಂಪು ಅವರ ಕವನವಾದ ಸರ್ವ ಜನಾಂಗದ ತೋಟವಾಗಬೇಕು ಎಂಬ ಆಶಯ ನಮ್ಮದು ಎಂದರು.

ಸಮ್ಮಿಶ್ರ ಸರ್ಕಾರ ಎಷ್ಟು ದಿನ ಉಳಿಯುತ್ತೆ?

ನನ್ನ ನಾಯಕತ್ವದ ಸಮ್ಮಿಶ್ರ ಸರ್ಕಾರ ಇಂದಿನಿಂದ ಅಸ್ತಿತ್ವಕ್ಕೆ ಬಂದಿದೆ. ಈ ಸರ್ಕಾರ ಉಳಿಯುತ್ತಾ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಇದರಲ್ಲಿ ಯಾವ ಅನುಮಾನವೂ ಬೇಡ. ನಮ್ಮದು ಸುಭದ್ರ ಸರ್ಕಾರವಾಗಿರಲಿದೆ. ದೇಶದ ಹಿತದೃಷ್ಟಿ ಕಾಪಾಡಲು ಸಮ್ಮಿಶ್ರ ಸರ್ಕಾರ ಬೇಕು. ನನ್ನ ಹಿತೈಷಿಗಳು, ನಾಡಿನ ಜನತೆಯ ಭರವಸೆ ಹುಸಿಗೊಳಿಸದೇ ಆಡಳಿತ. ಹಿಂದಿನ ಸರ್ಕಾರಗಳ ಉತ್ತಮ ಯೋಜನೆ ಮುಂದುವರಿಸಬೇಕಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಸ್ಪರ ವಿಶ್ವಾಸಕ್ಕೆ ಕೊರತೆಯಾಗದಂತೆ ಆಡಳಿತ ನಡೆಸಲು ನಿರ್ಧಾರ. ನನ್ನ ನಡವಳಿಕೆ ಮೂಲಕ ನಿಮ್ಮ ಅನುಮಾನ ಪರಿಹರಿಸುತ್ತೇನೆ ಎಂದು ಹೇಳಿದರು.

ಯಾವುದು ನೈತಿಕತೆ?

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರದ ಬಗ್ಗೆ ಬಿಜೆಪಿ ಮಿತ್ರರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೈತಿಕತೆ, ಅನೈತಿಕತೆ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಈಗ ಯಾರು ನೈತಿಕವಾಗಿ ಉಳಿದಿದ್ದಾರೆ ಎಂಬುದು ಕೇಳಿಕೊಳ್ಳಬೇಕಾಗುತ್ತದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಲು ಅವಕಾಶ ಮಾಡಿಕೊಟ್ಟಿದ್ದು ನಾನು.

ಅಲ್ಲದೇ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿದ್ದು ನಾನೇ. ಅವೆಲ್ಲ ನಡೆದು 12 ವರ್ಷಗಳು ಕಳೆದು ಹೋಗಿದೆ. ಇಂದಿನ ಸಮಾರಂಭಕ್ಕೆ ಘಟಾನುಘಟಿ ನಾಯಕರು ಆಗಮಿಸಿದ್ದಾರೆ. ಇದು ರಾಜ್ಯ ರಾಜಕೀಯದ ಇತಿಹಾಸದಲ್ಲಿಯೇ ಪ್ರಥಮ. ಹೀಗಾಗಿ ನಾನೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಿಶು ಎಂಬುದಾಗಿ ಹೇಳಿಕೊಂಡರು.

ಮೇ 25ರಂದು ವಿಶ್ವಾಸಮತ:

ವಿಧಾನಸಭೆಯಲ್ಲಿ ಮೇ 25ರಂದು ವಿಶ್ವಾಸಮತ ಯಾಚನೆ ನಡೆಯಲಿದೆ. ಬಳಿಕ ಮುಂದಿನ ನಡೆ ಬಗ್ಗೆ ವಿವರ ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದರು.

Comments are closed.