ಕರ್ನಾಟಕ

ಬಿರುಸಿನ ಮತದಾನ; ಸರದಿಯಲ್ಲಿ ನಿಂತು ಮತದಾನ ಮಾಡಿದ ವಿವಿಧ ರಾಜಕೀಯ ಮುಖಂಡರು, ಗಣ್ಯರು

Pinterest LinkedIn Tumblr

ಬೆಂಗಳೂರು: ರಾಜ್ಯ ವಿಧಾನಸಭಾ ಕ್ಷೇತ್ರಗಳಲ್ಲಿ 222 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯುತ್ತಿದ್ದು, ರಾಜಕೀಯ ಮುಖಂಡರು, ಗಣ್ಯರು ಬೆಳಗಿನಿಂದಲೇ ಸರದಿಯಲ್ಲಿ ನಿಂತು ಮತದಾನ ನಡೆಸಿದ್ದಾರೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಅವರ ಪತ್ನಿ ಚೆನ್ನಮ್ಮ, ಎಚ್‌.ಡಿ.ರೇವಣ್ಣ ಹಾಗೂ ಅವರ ಕುಟುಂಬ ಸದಸ್ಯರು ಹಾಸನದ ಹೊಳೇನರಸೀಪುರದ ಮತಗಟ್ಟೆ 244ರಲ್ಲಿ ಮತದಾನ ಮಾಡಿದರು.

ಎಚ್‌.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ರಾಮನಗರದಲ್ಲಿ ಮತದಾನದ ಹಕ್ಕು ಚಾಲಾಯಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಜೆಡಿಎಸ್‌ ಮ್ಯಾಜಿಕ್‌ ನಂಬರ್‌ಗಿಂತ ಹೆಚ್ಚು ಸ್ಥಾನ ಪಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುಖಂಡ ಕೆ.ಜೆ.ಜಾರ್ಜ್‌, ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ಕನಕಪುರದಲ್ಲಿ ಶ್ರೀ ಶ್ರೀ ರವಿಶಂಕರ್‌ ಹಾಗೂ ಕಲಬುರ್ಗಿಯ ಬಸವಾನಗರದಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ತುಮಕೂರಿನಲ್ಲಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮಿ ಮತ ಚಲಾಯಿಸಿದರು.

ಶಿಕಾರಿಪುರದಲ್ಲಿ ಮತಚಲಾಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಾಧ್ಯವಾದಷ್ಟು ಬೇಗ ಮತದಾನ ನಡೆಸುವಂತೆ ಮನವಿ ಮಾಡಿದ್ದಾರೆ. ಚುನಾವಣಾ ಆ್ಯಪ್‌ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು, ನಿಮ್ಮ ಮತಗಟ್ಟೆ, ಅಭ್ಯರ್ಥಿ ಮಾಹಿತಿ ಪಡೆಯಬಹುದು ಎಂದು ಟ್ವೀಟ್‌ ಮಾಡಿದ್ದಾರೆ.

‘ಇಂದು ಕರ್ನಾಟಕದ ಜನತೆ ಇತಿಹಾಸ ಸೃಷ್ಟಿಸಲು ಸರದಿಯಲ್ಲಿ ನಿಂತಿದ್ದಾರೆ…’ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

ಕನ್ನಡದಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಕರ್ನಾಟಕದ ನನ್ನ ಸೋದರಿಯರೇ ಹಾಗೂ ಸೋದರರೇ, ಇಂದು ಮತದಾನ ಮಾಡಿ’ ಎಂದಿದ್ದಾರೆ.

Comments are closed.