ಕರ್ನಾಟಕ

ರಾಜ್ಯದಲ್ಲಿ ಕಾಂಗ್ರೆಸ್ ಗೆ ಸೋಲು ಖಚಿತ: ಅಮಿತ್ ಶಾ

Pinterest LinkedIn Tumblr

ತುಮಕೂರು: ಕರ್ನಾಟಕದಲ್ಲಿ ಬಿಜೆಪಿ ಸುನಾಮಿ ಎದ್ದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ ಪರ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ರಾಹುಲ್ ಬಾಬಾ’ ಅವರೂ ತುಮಕೂರಿಗೆ ಬಂದಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂಬ ಹಗಲು ಗನಸು ಕಾಣುತ್ತಿದ್ದಾರೆ. ಬಾಬಾ, 2014ರ ನಂತರ ದೇಶದಲ್ಲಿ ನಡೆದ ಚುನಾವಣೆಗಳನ್ನು ಒಮ್ಮೆ ತಿರುಗಿ ನೋಡಿ. ನಿಮಗೆ ನೆನಪಿಲ್ಲದಿದ್ದರೆ ನಾನು ನೆನಪಿಸುವೆ. 14 ರಾಜ್ಯಗಳಲ್ಲಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ ಎಂದು ಅಮಿತ್ ಶಾ ಗುಡುಗಿದರು.

‌ಸಿದ್ದರಾಮಯ್ಯಗೆ ಸೋಲು ಖಚಿತ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಲು ಖಚಿತ. ಅದನ್ನು ಮನಗಂಡು ಈಗ ವಾಮಮಾರ್ಗ ಹಿಡಿದು ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಸಿದರು.

ಇದಕ್ಕೆ ಸ್ಪಷ್ಟ ನಿದರ್ಶನ ಬಾದಾಮಿ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಐಟಿ ದಾಳಿ ನಡೆದಿರುವುದು. ಕೋಟ್ಯಂತರ ರೂಪಾಯಿ ಸಿಕ್ಕಿರುವುದು. ಯುದ್ಧದಲ್ಲಿ ಬೆನ್ನು ತೋರಿಸಿ ಚಾಮುಂಡೇಶ್ವರಿ ಕ್ಷೇತ್ರದಿಂದ ಬಾದಾಮಿಗೆ ಓಡಿ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಅವರೇ ನಿಮಗೆ ಗೆಲುವು ಅಲ್ಲೂ ದಕ್ಕುವುದಿಲ್ಲ’ ಎಂದರು.

₹40 ಲಕ್ಷ ಮೊತ್ತದ ವಾಚ್ ಕಟ್ಟಿಕೊಂಡು ಓಡಾಡುತ್ತಿರುವ ಸಿದ್ಧರಾಮಯ್ಯ ಸಮಾಜವಾದಿ ಚಿಂತನೆ ಮಾತನಾಡುತ್ತಿದ್ದಾರೆ. ವಾಚು ನನ್ನದಲ್ಲ ಡಾ.ವರ್ಮಾ ಎಂಬುವವರು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಅವರು ಸುಮ್ಮನೆ ಕೊಟ್ಟರೆ? ಯಾಕೆ ಕೊಟ್ಟರು? ಏನು ಕೆಲಸಕ್ಕೆ ಕೊಟ್ಟರು? ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ. ಚುನಾವಾಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ವಾಚ್ ಬಗ್ಗೆ ವಿವರ ಒದಗಿಸಿದ್ದೀರಾ? ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಎಂದರೆ ವಿದ್ಯುತ್ ಉತ್ಪಾದನಾ ಕೇಂದ್ರ. ಅಲ್ಲಿಂದ ಪೂರೈಕೆಯಾಗುವ ಹೈ ಪವರ್ ವಿದ್ಯುತ್‌ಗೆ ಸಿದ್ದರಾಮಯ್ಯ ಎಂಬ ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋಗಿದೆ. ಹೀಗಾಗಿ ಅದನ್ನು ಬದಲಾಯಿಸಿ ಯಡಿಯೂರಪ್ಪ ಎಂಬ ಬಿಜೆಪಿಯ ಹೊಸ ಟ್ರಾನ್ಸ್‌ಫಾರ್ಮರ್‌ ಹಾಕಬೇಕಾಗಿದೆ. ಐದು ವರ್ಷ ಬಿಜೆಪಿ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಲಿದ್ದಾರೆ ಎಂದು ಹೇಳಿದರು.

Comments are closed.