
ಮೈಸೂರು: “ಏ ಮರಿಸ್ವಾಮಿ, ಬಾರಯ್ಯ ಇಲ್ಲಿ,ನೀನೇ ಇಲ್ಲೆಲ್ಲಾ ಓಡಾಡಿಕೊಂಡು ನನಗೆ ಓಟು ಹಾಕಿಸಬೇಕು’ ಎಂದು ಸಿಎಂ ಸಿದ್ದರಾಮಯ್ಯ ಕರೆದರೂ, “ನಾನು ಈಗ ಜೆಡಿಎಸ್ನಲ್ಲಿದ್ದೀನಿ, ನಿಮಗೆ ಓಟ್ ಹಾಕಲ್ಲ’ ಎಂದು ಗ್ರಾಮ ಪಂಚಾಯತ್ ಸದಸ್ಯ ರೊಬ್ಬರು ಮುಖಕ್ಕೆ ಹೊಡೆದ ರೀತಿಯಲ್ಲಿ ಹೇಳಿದ ಘಟನೆ ಬುಧವಾರ ನಡೆದಿದೆ.
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ರೋಡ್ ಶೋ ನಡೆಸಿ ಮತಯಾಚಿಸಲು ಬಂದಿದ್ದ ಸಂದರ್ಭದಲ್ಲಿ ಹಳೇ ಕೆಸರೆಯಲ್ಲಿ ನಡೆದ ಈ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವಂತಾಯಿತು.
ಬುಧವಾರ ಮಧ್ಯಾಹ್ನ ಕಾಮನಕೆರೆಹುಂಡಿಯಿಂದ ರೋಡ್ ಶೋ ಆರಂಭಿಸಿದ ಸಿದ್ದರಾಮಯ್ಯ, ಹಳೇ ಕೆಸರೆಗೆ ಬಂದಾಗ ಮಧ್ಯಾಹ್ನ 2 ಗಂಟೆ ದಾಟಿತ್ತು. ಈ ವೇಳೆ, ಜೆಡಿಎಸ್ ಕಾರ್ಯಕರ್ತರು ಮೈಸೂರಿನಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಭಾಗವಹಿಸುವ ಜೆಡಿಎಸ್- ಬಿಎಸ್ಪಿ ಸಮಾವೇಶಕ್ಕೆ ವಾಹನಗಳಲ್ಲಿ ಜನರನ್ನು ಹೊರಡಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆಗೆ, ಅಲ್ಲಿಗೆ ಸಿಎಂ ಆಗಮಿಸಿದರು. ಗ್ರಾಮದ ವೃತ್ತದಲ್ಲಿ ತೆರೆದ ವಾಹನದಲ್ಲಿ ನಿಂತು ಭಾಷಣ ಮಾಡುವ ಮೂಲಕ ಮತಯಾಚಿಸಿದ ಸಿದ್ದರಾಮಯ್ಯ, ಎಂದಿನಂತೆ ಗ್ರಾಮದ ಕೆಲ ಹಿರಿಯ ಮುಖಂಡರನ್ನು ಹೆಸರಿಡಿದು ಕರೆದರು. ಮತ್ತೆ ಕೆಲವರ ಹೆಸರು ನೆನಪಾ ಗದಿದ್ದಾಗ “ಈ ಕ್ಷೇತ್ರ ಬಿಟ್ಟು ಹತ್ತು ವರ್ಷ ಆಯ್ತಲ್ಲ ಕೆಲವರ ಹೆಸರು ಮರೆತೋಗಿದೆ’ ಎಂದರು.
ಗ್ರಾಪಂ ಸದಸ್ಯನ ತಿರಸ್ಕಾರ: ರಸ್ತೆ ಬದಿಯಲ್ಲಿ ನಿಂತಿದ್ದ ಗ್ರಾಪಂ ಸದಸ್ಯ ಮರಿಸ್ವಾಮಿಯನ್ನು ಕಂಡ ಸಿದ್ದರಾಮಯ್ಯ, “ಏ ಮರಿಸ್ವಾಮಿ, ಬಾರಯ್ಯ ಇಲ್ಲಿ, ನೀನೇ ಇಲ್ಲೆಲ್ಲಾ ನನ್ನ ಪರವಾಗಿ ಓಡಾಡಿ ಓಟು ಹಾಕಿಸಬೇಕು’ ಎಂದರು. ಆಗ ವಾಹನದ ಬಳಿಬಂದ ಮರಿಸ್ವಾಮಿ, “ನಾನೀಗ ಜೆಡಿಎಸ್ನಲ್ಲಿ ದ್ದೀನಿ. ನಿಮಗೆ ಓಟು ಕೇಳಲಾಗಲ್ಲ’ ಎಂದು ಸಿದ್ದರಾಮಯ್ಯ ಮಾತನ್ನು ತಿರಸ್ಕರಿಸಿದರು. “ನೀವು ದಲಿತ ವಿರೋಧಿ. ಖರ್ಗೆ, ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಲು ಬಿಡಲಿಲ್ಲ. ಶ್ರೀನಿವಾಸ ಪ್ರಸಾದ್ರನ್ನು ಮಂತ್ರಿ ಸ್ಥಾನದಿಂದ
ತೆಗೆದುಹಾಕಿದ್ರಿ, ನಿಮಗೇಕೆ ನಾನು ಸಪೋರ್ಟ್ ಮಾಡಲಿ? ನಾನು ಜೆಡಿಎಸ್ ಪರ ಕೆಲಸ ಮಾಡುತ್ತೇನೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರೊಬ್ಬರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ನಿಮ್ಮ ಜೊತೆ 15 ವರ್ಷ ಇದ್ದೆ. ನೀವು ದಲಿತ ವಿರೋಧಿ ಅಂತ ಗೊತ್ತಾದ್ದರಿಂದ ಜೆಡಿಎಸ್ ಸೇರಿದ್ದೇನೆ’ ಎಂದು ನಡುರಸ್ತೆಯಲ್ಲೇ ಏರಿದ ಧ್ವನಿಯಲ್ಲಿ ಉತ್ತರ ಕೊಟ್ಟರು. ಇದರಿಂದ ಕೊಂಚ ವಿಚಲಿತರಾದ ಸಿದ್ದರಾಮಯ್ಯ, “ನೀವೆಲ್ಲಾ ನಮಗೇ ಓಟು ಮಾಡ್ರಪ್ಪ, ಅವನು ಜೆಡಿಎಸ್ಗೆ ಮಾಡಲಿ, ಅವನನ್ನು ಮಾತಾಡಿಸಿ ನಾನು ತಪ್ಪು ಮಾಡಿದೆ’ ಎಂದು ಗರಂ ಆಗಿಯೇ ತೆರೆದ ವಾಹನದಿಂದ ಇಳಿದುಕಾರನ್ನೇರಿದರು. ಆ ಸಂದರ್ಭದಲ್ಲಿ ಮರಿಸ್ವಾಮಿ ಮತ್ತು ಜೊತೆಗಿದ್ದ ಕೆಲ ಯುವಕರು, ಜೆಡಿಎಸ್ ಪಕ್ಷಕ್ಕೆ, ಜಿ.ಟಿ.ದೇವೇಗೌಡರಿಗೆ ಜೈಕಾರ ಕೂಗಿದರು.
ತೆರೆದ ವಾಹನ ಅಡ್ಡಗಟ್ಟಿದ ಯುವಕ
ಇದಕ್ಕೂ ಮುನ್ನ, ಕಾಮಕೆರೆ ಹುಂಡಿಯಲ್ಲಿ ರೋಡ್ ಶೋ ನಡೆಸಿದ ಸಿದ್ದರಾಮಯ್ಯ, ಅಲ್ಲಿನ ದಲಿತಕೇರಿಗೆ ಮತಯಾಚನೆಗೆ ಹೋದಾಗ ಯುವಕನೊಬ್ಬ ತೆರೆದ ವಾಹನ ಅಡ್ಡಗಟ್ಟಿ “ಚುನಾವಣೆಯಲ್ಲಿ ಓಟು ಕೇಳಲು ಬಂದಿದ್ದೀರಿ, ನಮ್ಮ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಇಲ್ಲೊಂದು ಸರ್ಕಾರಿ ಕಟ್ಟಡ ನಿರ್ಮಿಸಿಲ್ಲವೇಕೆ’ ಎಂದು ಪ್ರಶ್ನಿಸಿದರು. ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ, “ಇಲ್ಲಿಗೆ ಅಂಬೇಡ್ಕರ್ ಸಮುದಾಯ ಭವನ ಮಂಜೂರು ಮಾಡಿದ್ದೇವೆ. ಎಲೆಕ್ಷನ್ ಆದ ಮೇಲೆ ಕೆಲಸ ಶುರು ಆಗುತ್ತೆ, ನೀನು ಭಾಷಣ ಮಾಡಬೇಡ ಬಿಡಪ್ಪಾ’ ಎಂದು ಹೇಳಿ ಬಂದರು.
-ಉದಯವಾಣಿ
Comments are closed.