ಕರ್ನಾಟಕ

ಈತ ತನ್ನ ಪತ್ನಿಗೆ ಹಲ್ಲೆ ಮಾಡಿದಾಗೆಲ್ಲ ಮೈಮೇಲೆ ಶಿವ ಬಂದಿದ್ದಾನೆ ಎಂದು ಹೇಳುತ್ತಾನಂತೆ ! ಏನಿದು ವಿಷಯ…

Pinterest LinkedIn Tumblr

ಬೆಂಗಳೂರು: ‘ಮೈಮೇಲೆ ಶಿವ ಬಂದಿದ್ದಾನೆ…ಆ ಶಿವ ನಿನ್ನನ್ನು ಕೊಲ್ಲಲು ಹೇಳುತ್ತಿದ್ದಾನೆ’ ಎಂದು ಹೇಳಿ ಪತ್ನಿ ಮೇಲೆ ಹಲ್ಲೆ ನಡೆಸುತ್ತಾ, ನಾನಾ ರೀತಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಎಚ್‌ಬಿಆರ್‌ ಲೇಔಟ್‌ ನಿವಾಸಿ ಟೆಕ್ಕಿ ನರೇಶ್‌ ಎಂಬಾತನ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಕ್ರಿಮಿನಲ್‌ ಕೇಸು ದಾಖಲಾಗಿದೆ.

2017ರ ಜುಲೈನಲ್ಲಿ ವಿವಾಹವಾಗಿದ್ದ ಕವಿತಾ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಪತಿ ಮತ್ತು ಆತನ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾರೆ. ‘ಸುಳ್ಳುಗಳನ್ನು ಹೇಳಿ ಮದುವೆಯಾಗಿದ್ದ ಪತಿ, ನಂತರ ಸಣ್ಣ ಪುಟ್ಟ ವಿಷಯಗಳಿಗೂ ಕಿರುಕುಳ ನೀಡುತ್ತಾ ಹಿಂಸಿಸಲು ಆರಂಭಿಸಿದ್ದಾರೆ. ‘ತನ್ನ ಮೈಮೇಲೆ ಶಿವ ಬರುತ್ತಿದ್ದಾನೆ.,’ಆತ ಆಡಿಸಿದಂತೆ ನಾನು ಆಡುತ್ತಿದ್ದೇನೆ. ಆತನೇ ನಿನ್ನನ್ನು ಕೊಲೆ ಮಾಡಲು ಸೂಚಿಸಿದ್ದಾನೆ. ಎಂದು ಹೇಳಿ ಹಲ್ಲೆ ನಡೆಸುತ್ತಿದ್ದಾನೆ. ಈ ವೇಳೆ ಹೆಚ್ಚಿನ ವರದಕ್ಷಿಣೆ ತರುವಂತೆ, ಬೆಲೆಬಾಳುವ ರೇಷ್ಮೆ ಸೀರೆಗಳನ್ನು ಮನೆಯಿಂದ ತಂದು ಕೊಡುವಂತೆ ಒತ್ತಾಯಿಸುತ್ತಿದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಸ್ಯಹಾರ- ಮಾಂಸಾಹಾರ:

ಪತಿ ಪತ್ನಿ ಇಬ್ಬರೂ ಟೆಕ್ಕಿಗಳಾಗಿದ್ದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇಬ್ಬರದ್ದೂ ಸಸ್ಯಹಾರಿ ಆಹಾರ ಸಂಸ್ಕೃತಿಯ ಕುಟುಂಬ. ಆದರೆ, ನರೇಶ್‌ ಮತ್ತು ಕುಟುಂಬ ಮಾಂಸಹಾರ ಸೇವಿಸುತ್ತಾರೆ. ”ಮದುವೆ ಸಂದರ್ಭದಲ್ಲಿ ತಾವು ಸಂಪೂರ್ಣ ಸಸ್ಯಹಾರಿ ಎಂದೇ ಹೇಳಿಕೊಂಡಿದ್ದರು. ಆದರೆ ಹನಿಮೂನ್‌ಗೆ ಹೋದ ವೇಳೆ ಪತಿ ಮಾಂಸಹಾರ ಸೇವಿಸುತ್ತಾರೆ ಎನ್ನುವುದು ನನಗೆ ಗೊತ್ತಾಯಿತು. ಹನಿಮೂನ್‌ ಮುಗಿಸಿಕೊಂಡು ಮನೆಗೆ ಬಂದಾಗ ಪತಿ ಮನೆಯವರೆಲ್ಲರೂ ಮಾಂಸಹಾರ ಸೇವಿಸುತ್ತಿರುವುದು ಗೊತ್ತಾಯಿತು. ನಾನು ಸೇವಿಸುವುದಿಲ್ಲ ಎಂದಿದ್ದಕ್ಕೆ ನನಗೆ ಕಿರುಕುಳ ನೀಡಿ ಮಾಂಸಹಾರ ಸೇವಿಸುವಂತೆ ಒತ್ತಾಯಿಸಿದ್ದಲ್ಲದೆ, ಮನೆಯಲ್ಲೂ ಮಾಂಸಹಾರದ ಅಡುಗೆ ಮಾಡುವಂತೆ ಒತ್ತಡ ಹೇರಿದ್ದಾರೆ,” ಎಂದು ಕವಿತಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕೆಲಸ ಬಿಡಿಸಿದರು

ಮದುವೆ ನಂತರ ನನಗೆ ಕೆಲಸ ಬಿಡುವಂತೆ ಒತ್ತಾಯಿಸಿದರು. ಇಷ್ಟ ಇಲ್ಲದಿದ್ದರೂ ಒತ್ತಾಯಕ್ಕೆ ಮಣಿದು ಕೆಲಸ ಬಿಟ್ಟೆ. ಆದರೆ, ಕಂಪನಿಯಿಂದ ಅನುಭವ ಪತ್ರ ತರುವುದಕ್ಕೂ ನನಗೆ ಅವಕಾಶ ಕೊಡಲಿಲ್ಲ. ನನ್ನ ಸಹೋದರ ಸಂಬಂಧಿಗಳ ಜತೆಗೆ ಮಾತಾಡಿದರೂ ಅನುಮಾನ ಪಡುತ್ತಿದ್ದಾರೆ. ನನಗೆ ನೆಲದ ಮೇಲೆ ಮಲಗಲು ಸೂಚಿಸಿ, ಅವರು ಮಂಚದ ಮೇಲೆ ಮಲಗುತ್ತಾರೆ. ಫ್ಯಾನ್‌ ಆಫ್‌ ಮಾಡಿ ಕಿರುಕುಳ ನೀಡುತ್ತಾರೆ,” ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಎಲ್ಲಾ ಸುಳ್ಳು

ನನಗೆ ಮಾಂಸಾಹಾರ ಇಷ್ಟವಿಲ್ಲ. ಕುಡಿಯುವುದು, ಸಿಗರೇಟ್‌ ಸೇದುವುದೂ ಇಷ್ಟ ಇಲ್ಲ. ಮದುವೆ ಸಂದರ್ಭದಲ್ಲೇ ನರೇಶ್‌ಗೆ ಎಲ್ಲವನ್ನೂ ವಿವರಿಸಿದ್ದೆ. ಆತ ಮತ್ತು ಆತನ ಪೋಷಕರು ಕೂಡ ತಾವೂ ಅಷ್ಟೆ ಟೀ-ಕಾಫಿ ಬಿಟ್ಟು ಬೇರೇನೂ ಕುಡಿಯುವುದಿಲ್ಲ. ಸಸ್ಯಹಾರ ಮಾತ್ರ ಸೇವಿಸುತ್ತೇವೆ ಎಂದಿದ್ದರು. ಆದರೆ ಮದುವೆ ಆದ ಕೆಲ ದಿನಗಳಲ್ಲೇ ಎಲ್ಲವೂ ಸುಳ್ಳು ಎಂದು ಗೊತ್ತಾಯಿತು. ಚೆನ್ನಾಗಿ ಮಾಂಸಹಾರ ಸೇವಿಸುತ್ತಾರೆ. ಮದ್ಯಪಾನವನ್ನೂ ಮಾಡುತ್ತಾರೆ. ವಿಪರೀತ ಕುಡಿದಿದ್ದಾಗಲೇ ಜಾಲಿ ರೈಡ್‌ಗೆಂದು ಪತಿ ನನ್ನನ್ನು ಕಾರಲ್ಲಿ ಕೂರಲು ಒತ್ತಾಯಿಸುತ್ತಾರೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

Comments are closed.