ಕರ್ನಾಟಕ

ನಕಲಿ ವಕೀಲನ ಬಣ್ಣ ಬಯಲು: 18 ವರ್ಷಗಳಿಂದ ವಕೀಲನ ಸೋಗು

Pinterest LinkedIn Tumblr


ಬೆಂಗಳೂರು: ಇದು ಆಶ್ಚರ್ಯವಾದರೂ ಸತ್ಯ. ಎಲ್‌ಎಲ್‌ಬಿ ಓದದ, ವಕೀಲನೂ ಅಲ್ಲದ ವ್ಯಕ್ತಿಯೊಬ್ಬ ಕಳೆದ 18 ವರ್ಷಗಳಿಂದ ವಕೀಲನ ಸೋಗಿನಲ್ಲಿ ಹತ್ತಾರು ನ್ಯಾಯಾಲಯಗಳಲ್ಲಿ ಕಕ್ಷಿದಾರರ ಪರ ವಾದಿಸುತ್ತಿದ್ದವನನ್ನು ಇತರೆ ವಕೀಲರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸುಮಾರು 51 ವರ್ಷದ ಸೂರ್ಯಪ್ರಕಾಶ್‌ ಬಂಧಿತ ಆರೋಪಿ. ಸೋಮವಾರ ಮಧ್ಯಾಹ್ನ ಮೇಯೋ ಹಾಲ್‌ ಕೋರ್ಟ್‌ ಆವರಣದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲೇ ಈತನ ಅಸಲಿ ಬಣ್ಣ ಬಯಲಾಗಿದೆ. ನಂತರ ವಕೀಲರ ಸಮೂಹವೇ ಸೇರಿ ಈತನನ್ನು ಹಿಡಿದು ಅಶೋಕ್‌ನಗರ ಠಾಣೆಗೆ ಒಪ್ಪಿಸಿದ್ದಾರೆ.

ನಡೆದದ್ದೇನು? :
ಆಸ್ತಿ ವಿವಾದವೊಂದಕ್ಕೆ ಸಂಬಂಧಪಟ್ಟಂತೆ ಈತ ಕಕ್ಷಿದಾರರೊಬ್ಬರ ಪರವಾಗಿ ವಕಾಲತ್ತು ವಹಿಸುವುದಾಗಿ ಹೇಳಿಕೊಂಡು ನ್ಯಾಯಾಲಯಕ್ಕೆ ಬಂದಿದ್ದ. ಆದರೆ ಇದೇ ವ್ಯಕ್ತಿ, ಇದೇ ಪ್ರಕರಣದಲ್ಲಿ ಕಕ್ಷಿದಾರರ ಪರ ಜಿಪಿಎ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದ. ನ್ಯಾಯಾಲಯಕ್ಕೆ ಬರುತ್ತಿದ್ದಂತೆ ಎದುರುದಾರ ವಕೀಲರಾದ ಅರುಣ್‌, ವೆಂಕಟೇಶ್‌ಗೆ ಅನುಮಾನ ಬಂದಿತ್ತು. ಅನುಮಾನದ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತಂದ ಇವರು, ದಾಖಲೆಗಳನ್ನು ಪರಿಶೀಲಿಸುವಂತೆ ವಿನಂತಿಸಿದರು. ಅದರಂತೆ ನ್ಯಾಯಾಧೀಶರು ಗುರುತಿನ ಚೀಟಿ ತೋರಿಸುವಂತೆ ಸೂಚಿಸಿದರು.

ನ್ಯಾಯಾಧೀಶರು ಗುರುತಿನ ಚೀಟಿ ತೋರಿಸಲು ಹೇಳುತ್ತಿದ್ದಂತೆ ಜೋರು ಧ್ವನಿಯಲ್ಲಿ ಕಿರುಚಾಡಿದ ಈ ವ್ಯಕ್ತಿ ಹೈಡ್ರಾಮಾ ಶುರುವಿಟ್ಟುಕೊಂಡಿದ್ದಾನೆ. ‘ ನಾನು ಮಹಾರಾಷ್ಟ್ರದಲ್ಲಿ ಕಾನೂನು ಪದವೀಧರ. ದಾಖಲೆಗಳೆಲ್ಲಾ ಮುಂಬೈನಲ್ಲಿವೆ. ನನ್ನ ದಾಖಲೆ ಕೇಳುವ ಅಧಿಕಾರ ನಿಮಗೆ ಇಲ್ಲ’ ಎಂದು ನ್ಯಾಯಾಧೀಶರ ಎದುರಿಗೇ ಕಿರುಚಾಡಿದ್ದಾನೆ.

ಈತನ ವರ್ತನೆಯಿಂದಲೇ ಅಲ್ಲಿದ್ದ ವಕೀಲ ಸಮೂಹಕ್ಕೆ ಮತ್ತು ನ್ಯಾಯಾಲಯಕ್ಕೆ ಈತ ವಕೀಲ ಆಗಿರಲು ಸಾಧ್ಯವಿಲ್ಲ ಎನ್ನುವುದು ಮನವರಿಕೆ ಆಗಿ, ‘ ನಿಮ್ಮ ವಕೀಲಿಕೆಯ ನೋಂದಣಿ ನಂಬರ್‌ ಆದರೂ ಹೇಳಿ. ದಾಖಲೆಗಳನ್ನು ಇಂಟರ್‌ನೆಟ್‌ ಮೂಲಕ ತೆಗೆಯುತ್ತೇವೆ’ ಎಂದು ಉಳಿದ ವಕೀಲರು ವಿನಂತಿಸಿದರು. ಅದಕ್ಕೂ ಒಪ್ಪದ ಆತ ವಿತಂಡವಾದದಲ್ಲೇ ಮುಳುಗಿದ್ದಾಗ, ನ್ಯಾಯಾಧೀಶರು ಈತನ ವಿರುದ್ಧ ತನಿಖೆಗೆ ಆಗ್ರಹಿಸುವುದಾಗಿ ತಿಳಿಸಿದರು.

ಕ್ಷಮೆ ಕೇಳಿದ:
ನ್ಯಾಯಾಲಯದ ಆವರಣದಲ್ಲಿ ಹೈಡ್ರಾಮಾ ನಡೆಯುತ್ತಿದ್ದಾಗಲೇ ವಕೀಲರ ಸಂಘದ ಪದಾಧಿಕಾರಿಗಳೆಲ್ಲ ಸ್ಥಳದಲ್ಲಿ ಜಮಾಯಿಸಿ ಸೂರ್ಯಪ್ರಕಾಶ್‌ನನ್ನು ವಕೀಲರ ಸಂಘದ ಕಚೇರಿಗೆ ಕರೆದೊಯ್ದು ಆರಂಭದಲ್ಲಿ ಗೌರವದಿಂದಲೇ ವಿಚಾರಿಸಿದರು. ಮೊದ ಮೊದಲು ನಾಟಕ ಆಡಿದ ಆರೋಪಿ, ಕೊನೆಗೆ ತಾನು ವಕೀಲ ಅಲ್ಲ ಎನ್ನುವುದನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ. ಕ್ಷಮೆಗೆ ಸುಮ್ಮನಾಗದ ವಕೀಲರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೊದಲು ಧಮ್ಕಿ, ಬಳಿಕ ಗೋಗರೆತ:
ನ್ಯಾಯಾಲಯದ ಆವರಣದಲ್ಲೇ ವಕೀಲರ ಕೈಗೆ ಸಿಕ್ಕಿ ಬಿದ್ದ ಸೂರ್ಯಪ್ರಸಾದ್‌ ಆರಂಭದಲ್ಲಿ ವಕೀಲರಿಗೇ ಧಮ್ಕಿ ಹಾಕಿದ್ದ. ನನ್ನ ವಿರುದ್ಧ ದೂರು ಕೊಟ್ಟರೆ ನಿಮ್ಮೆಲ್ಲರ ವಿರುದ್ಧ ದೂರು ನೀಡಿ ಜೈಲಿಗೆ ಹಾಕಿಸುತ್ತೇನೆ ಎಂತಲೂ ಹೆದರಿಸುವ ಪ್ರಯತ್ನ ಮಾಡಿದ್ದ. ಕೊನೆಗೆ ಈತನನ್ನು ಎಳೆದುಕೊಂಡು ವಕೀಲರ ಸಂಘದ ಕಚೇರಿಯಲ್ಲಿ ಕೂರಿಸಿ ದಾಖಲೆಗಳನ್ನು ಪರಿಶೀಲಿಸಿದಾಗ ಈತ ನಕಲಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿತ್ತು. ಕೊನೆಗೆ ವಕೀಲರೇ ಈತನನ್ನು ಅಶೋಕ್‌ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದರು. ಪೊಲೀಸರ ಎದುರು ‘ತಪ್ಪಾಯ್ತು ಬಿಟ್ಟು ಬಿಡಿ. ಕ್ಷಮಾಪಣೆ ಬರೆದು ಕೊಡ್ತೀನಿ. ಬಿಟ್ಟು ಕಳುಹಿಸಿ ‘ ಎಂದು ಗೋಗರೆದಿದ್ದ. ಆದರೆ, ಅಧಿಕಾರಿಗಳು ವಂಚನೆ, ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಕ್ರಿಮಿನಲ್‌ ಕೇಸು ದಾಖಲಿಸಿದ್ದಾರೆ.

“ಇಷ್ಟು ವರ್ಷ ನಾವು ಸೂರ್ಯಪ್ರಕಾಶ್‌ಗೆ ಹಿರಿಯ ವಕೀಲ ಎನ್ನುವ ರೀತಿಯಲ್ಲೇ ಗೌರವ ಕೊಡುತ್ತಿದ್ದೆವು. ಈತ ವಕೀಲನೇ ಅಲ್ಲ ಎನ್ನುವುದು ಗೊತ್ತಾಗಿ ಶಾಕ್‌ ಆಗಿದೆ. ಈತನ ಬಂಧನದ ನಂತರ ಬರುತ್ತಿರುವ ಮಾಹಿತಿಗಳು ಆಘಾತಕಾರಿಯಾಗಿವೆ. ನ್ಯಾಯಾಲಯದ ಸಿಬ್ಬಂದಿಗೆ, ಪೊಲೀಸ್‌ ಸಿಬ್ಬಂದಿಗೆಲ್ಲ ಈತ ಧಮ್ಕಿ ಹಾಕಿದ್ದ ಎನ್ನುವ ವಿವರಗಳು ಈಗ ಸಿಗುತ್ತಿವೆ.” –ಅರುಣ್‌, ವಕೀಲರು

ಶಾಕ್‌ ಆದ ಪೊಲೀಸರು:
ಸೂರ್ಯಪ್ರಸಾದ್‌ನನ್ನು ವಕೀಲರೇ ಠಾಣೆಗೆ ಕರೆತರುತ್ತಿದ್ದಂತೆ ಪೊಲೀಸರೇ ಶಾಕ್‌ ಆದರು. ಹತ್ತಾರು ಬಾರಿ ಅಶೋಕ್‌ನಗರ ಠಾಣೆಗೂ ಬಂದಿದ್ದ ಈತ, ವಕೀಲನ ಸೋಗಿನಲ್ಲಿ ಅವರಿಗೂ ಧಮ್ಕಿ ಹಾಕಿದ್ದ. ಈತ ವಕೀಲನೇ ಅಲ್ಲ ಎನ್ನುವುದು ಗೊತ್ತಾಗುತ್ತಲೇ ಪೊಲೀಸರು ಶಾಕ್‌ಗೆ ಒಳಗಾದರು.

ನೂರಾರು ಕೇಸು ನಡೆಸಿದ್ದ:
ಬಂಧಿತ ಸೂರ್ಯಪ್ರಕಾಶ್‌ ಕಳೆದ 18 ವರ್ಷಗಳಲ್ಲಿ ಹೈಕೋರ್ಟ್‌ ಸೇರಿದಂತೆ ನಾನಾ ನ್ಯಾಯಾಲಯಗಳಲ್ಲಿ ನೂರಾರು ಕೇಸುಗಳನ್ನು ನಡೆಸಿದ್ದಾನೆ. ವಕೀಲ ಅಲ್ಲದಿದ್ದರೂ ವಕಾಲತ್ತಿನಲ್ಲಿ ವಕೀಲನಂತೆ ಸಹಿ ಹಾಕಿದ್ದಾನೆ ಎನ್ನುವ ವಿವರಗಳು ಈಗ ವಕೀಲರ ಸಂಘಕ್ಕೆ ಗೊತ್ತಾಗುತ್ತಿವೆ. ಈ ಬಗ್ಗೆ ಸಂಪೂರ್ಣ ವಿವರ ಕಲೆ ಹಾಕುತ್ತಿರುವ ಸಂಘದ ಪದಾಧಿಕಾರಿಗಳು ಎಲ್ಲ ವಿವರಗಳನ್ನು ನ್ಯಾಯಾಲಯದ ಗಮನಕ್ಕೆ ತರಲಿದ್ದಾರೆ.

ಸಿಬಿಐನಲ್ಲಿ ಆರೋಪ ಪಟ್ಟಿ:
ಬಂಧಿತನ ವಿರುದ್ಧ ಸಿಬಿಐ ಕೂಡ ಪ್ರಕರಣವೊಂದರಲ್ಲಿ ಆರೋಪ ಪಟ್ಟಿ ಸಲ್ಲಿಸಿದೆ ಎಂದು ವಕೀಲ ವೆಂಕಟೇಶ್‌ ತಿಳಿಸಿದ್ದು, ಈ ಬಗ್ಗೆ ದಾಖಲೆಗಳನ್ನು ಸದ್ಯದಲ್ಲೇ ಸಂಗ್ರಹಿಸಲಾಗುವುದು ಎಂದು ಹೇಳಿದ್ದಾರೆ.

Comments are closed.