ಕರ್ನಾಟಕ

ಪೊಲೀಸ್‌ ಜೀಪ್‌ಗಳಲ್ಲೇ ಹಣ ರವಾನೆ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ: ದೇವೇಗೌಡ

Pinterest LinkedIn Tumblr


ಬೆಂಗಳೂರು: ಗೃಹ ಇಲಾಖೆಯಲ್ಲಿ ಕಾನೂನು ಸಡಿಲವಾಗಿದೆ. ಪೊಲೀಸ್‌ ಜೀಪ್‌ಗಳಲ್ಲೇ ಚುನಾವಣೆಗೆ ಹಣ ರವಾನೆಯಾಗುತ್ತಿದೆ. ಗೃಹ ಇಲಾಖೆಯಲ್ಲಿ ಕೆಂಪಯ್ಯ ಅವರ ಕೈ ಚಳಕದ ಬಗ್ಗೆ ಕೇಂದ್ರ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಿಳಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ರಾವತ್ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ದೇವೇಗೌಡ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಸರ್ಕಾರದ ಕೆಲವು ಅಧಿಕಾರಿಗಳ ನಡವಳಿಕೆ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಆದರೆ ಇದರ ಬಗ್ಗೆ ನನಗೆ ಅನುಮಾನ ಇದೆ ಅಂಥ ದೂರು ಸಲ್ಲಿಸಲಾಗಿದೆ ಎಂದು ದೇವೇಗೌಡರು ಹೇಳಿದರು.

ಗೃಹ ಇಲಾಖೆಯಲ್ಲಿ ಕಾನೂನು ಸಡಿಲವಾಗಿದೆ. ನಿಷ್ಠಾವಂತ ಅಧಿಕಾರಿಗಳನ್ನು ಸರ್ಕಾರ ಬದಲಾವಣೆ ಮಾಡಿದೆ. ಕೆಂಪಯ್ಯ ಅವರ ಆಫೀಸ್ ವಿಕಾಸಸೌಧದಿಂದ ತೆಗೆಯಲಾಗಿದೆ ಆದರೆ ಬೇರೆ ಕಡೆ ಅವರ ಆಫೀಸ್ ಶಿಫ್ಟ್ ಆಗಿದೆ ಇದರ ಬಗ್ಗೆ ಆಯೋಗದ ಗಮನಕ್ಕೆ ತರಲಾಗಿದೆ ಎಂದು ಮಾಜಿ ಪ್ರಧಾನಿ ಹೇಳಿದರು.

ಸಿಎಂ ಕಚೇರಿಯ ಸಿಬ್ಬಂದಿ, ಅಧಿಕಾರಿಗಳು ಚುನಾವಣೆಗಾಗಿ ದುಡ್ಡು ಸಂಗ್ರಹಿಸುತ್ತಿದ್ದಾರೆ. ರಾಮನಗರ, ಹಾಸನ, ಮಂಡ್ಯ, ಮೈಸೂರು ಭಾಗಗಳಲ್ಲಿ ಬೇಕಾದ ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ ಎಂದು ಮನವಿ ಸಲ್ಲಿಸಲಾಗಿದೆ ಎಂದು ಗೌಡರು ತಿಳಿಸಿದರು.

ಪೊಲೀಸ್ ಜೀಪ್ ಗಳಲ್ಲಿ ಹಣ ಸಾಗಿಸುತ್ತಿರುವುದು ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ಡಿಸಿ ಹಾಗೂ ಎಸ್ ಪಿ ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದೂ ಆಯೋಗಕ್ಕೆ ಮನವಿ ಸಲ್ಲಿಸಿದ್ದೇನೆ ಎಂದು ದೇವೇಗೌಡ ಮಾಹಿತಿ ನೀಡಿದರು.

Comments are closed.