ಕರ್ನಾಟಕ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ನಡೆಸಿದ ದಲಿತ ನಾಯಕರ ಜತೆ ಸಂವಾದದಲ್ಲಿ ಗಲಭೆ

Pinterest LinkedIn Tumblr


ಮೈಸೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಮೈಸೂರಿನ ರಾಜೇಂದ್ರ ಕಲಾಮಂಟಪದಲ್ಲಿ ನಡೆಸಿದ ದಲಿತ ನಾಯಕರ ಜೊತೆಗೆ ಸಂವಾದದ ವೇಳೆ ಸಭೆಯಲ್ಲಿ ಗೊಂದಲ ಉಂಟಾಯಿತು.

ಆರಂಭದಲ್ಲಿ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು, ನರೇಂದ್ರ ಮೋದಿ ಅವರು ಸಂವಿಧಾನ ಶ್ರೇಷ್ಠ ಎಂದು ಹೇಳಿದ್ದಾರೆ. ಆದರೆ ಕೆಲ ನಾಯಕರು ಸಂವಿಧಾನ ಬದಲಾವಣೆಯ ಬಗ್ಗೆ ಪ್ರಚೋಧನಕಾರಿ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಸಂವಿಧಾನ ಬದಲಾವಣೆ ಸಂಬಂಧ ಶ್ರೀನಿವಾಸ್ ಪ್ರಸಾದ್ ಅವರಿಗೆ ಅಮಿತ್ ಷಾ ಸ್ಪಷ್ಟನೆ ನೀಡುವ ಸಂದರ್ಭ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಸಂವಿಧಾನ ಬದಲಾಯಿಸುವ ಬಗ್ಗೆ ಹೇಳಿಕೆ ನೀಡಿರುವ ಅನಂತ್‌ಕುಮಾರ್ ಹೆಗಡೆ ಅವರ ಅಭಿಪ್ರಾಯ ವೈಯಕ್ತಿಕವಾಗಿದೆ. ಅವರ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಅಮಿತ್ ಶಾ ತಿಳಿಸಿದರು.

ಈ ಸಂದರ್ಭ ಸಭೆಯಲ್ಲಿ ಭಾಗವಹಿಸಿದ್ದ ಚೋರನಹಳ್ಳಿ ಶಿವಣ್ಣ ಎನ್ನುವವರು ಹಾಗಾದರೆ ಅನಂತ್‌ಕುಮಾರ್ ಹೆಗಡೆ ಅವರನ್ನು ಸಂಪುಟದಲ್ಲಿ ಏಕೆ ಉಳಿಸಿದ್ದೀರಿ ಎಂದು ಗದ್ದಲವೆಬ್ಬಿಸಿದರು.

ಇದರಿಂದ ಕೆಲಕಾಲ ಸಂವಾದ ನಿಂತಿತು. ಬಳಿಕ ಬಿಜೆಪಿ ಕಾರ್ಯಕರ್ತರು, ಪೊಲೀಸರು ಶಿವಣ್ಣ ಅವರನ್ನು ಸಭೆಯಿಂದ ಹೊರಗೆ ಕರೆದೊಯ್ದರು. ನಂತರ ಸಂವಾದ ಮುಂದುವರೆಯಿತು.

ಸಂವಾದದಲ್ಲಿ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಸಂಬಂಧ ಉತ್ತರಿಸಿದ ಅಮಿತ್ ಷಾ, ಗೃಹ ಸಚಿವ ರಾಜನಾಥ್‌ಸಿಂಗ್ ನೇತೃತ್ವದಲ್ಲಿ ಹಣಕಾಸು ಸಚಿವ, ಕಾನೂನು ಸಚಿವ, ಸಮಾಜ ಕಲ್ಯಾಣ ಇಲಾಖೆಯ ಸಚಿವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಆದಷ್ಟು ಬೇಗ ಸುಪ್ರೀಂಕೋರ್ಟ್ ಪೀಠದ ಮುಂದೆ ದಲಿತರ ಪರವಾಗಿ ಅರ್ಜಿ ಸಲ್ಲಿಸಲಿದೆ ಎಂದರು.

ರಾಜಕೀಯ ಮಹಿಳಾ ಮೀಸಲಾತಿ ಕುರಿತು ಉತ್ತರಿಸಿದ ಷಾ, ಮಹಿಳಾ ಮೀಸಲಾತಿ ನೀಡಲು ಮೋದಿ ಸರಕಾರ ಬದ್ಧವಾಗಿದೆ. ಆದರೆ ಕೆಲ ಪಕ್ಷಗಳು ಇದಕ್ಕೆ ವಿರುದ್ಧವಾಗಿವೆ. ಎಲ್ಲ ಪಕ್ಷಗಳಲ್ಲಿ ಸರ್ವಾನುಮತ ಮೂಡಿಸಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲು ಪ್ರಯತ್ನಿಸಲಾಗುವುದು ಎಂದು ಉತ್ತರಿಸಿದರು.

ಇದೇ ವೇಳೆ ಮಾತನಾಡಿದ ಅವರು, ಸಂವಿಧಾನ ರಚಿಸಿದ ಅಂಬೇಡ್ಕರ್ ಅವರನ್ನು ಸಂಸತ್ ಪ್ರವೇಶ ಮಾಡದಂತೆ ಕಾಂಗ್ರೆಸ್ ಯತ್ನಿಸಿತು. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಅಂಬೇಡ್ಕರ್ ಅವರಿಗೆ ಭಾರತರತ್ನ ಸಿಗಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 125ನೇ ವರ್ಷದ ಅಂಬೇಡ್ಕರ್ ಜಯಂತಿಗಾಗಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಯಿತು. ಈಗ ಅಂಬೇಡ್ಕರ್ ಅವರ ಜೀವನದ ಪ್ರಮುಖ 5 ಘಟನೆಗಳ ಆಧಾರಿಸಿ ಪಂಚತೀರ್ಥ ರಾಷ್ಟ್ರೀಯ ಸ್ಮಾರಕ ನಿರ್ಮಿಸಲು ಕ್ರಮವಹಿಸಲಾಗಿದೆ ಎಂದು ಅಮಿತ್ ಷಾ ಸಂವಾದದಲ್ಲಿ ತಿಳಿಸಿದರು.

Comments are closed.