ಬೆಂಗಳೂರು: ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿಗೆ ಚಾಕು ಇರಿತ ಪ್ರಕರಣದ ಆರೋಪಿ ತೇಜರಾಜ್ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ. ಸಿಂಗ್ ಮತ್ತು ಡಿಸಿಪಿ ಚಂದ್ರಗುಪ್ತರಿಂದ ಆರೋಪಿಯ ವಿಚಾರಣೆ ನಡೆಸಲಾಗಿದೆ.
ವಿಚಾರಣೆ ವೇಳೆ, ಲೋಕಾಯುಕ್ತರ ಜತೆ ತಾನು ಕೊಟ್ಟ ದೂರುಗಳ ಬಗ್ಗೆ 5 ನಿಮಿಷ ಚರ್ಚಿಸಿದೆ. ಸಾಕಷ್ಟು ಸಾಕ್ಷಿ ಒದಗಿಸಿದರೂ ದೂರನ್ನು ವಜಾ ಮಾಡಿದ ಹಿನ್ನೆಲೆ ಕುರಿತು ಅವರನ್ನು ಪ್ರಶ್ನಿಸಿದೆ ಇವೆಲ್ಲವಕ್ಕೂ ವಿಶ್ವನಾಥ ಶೆಟ್ಟಿ ಅವರು ನಗುತ್ತ ನಗುತ್ತ ಉತ್ತರ ಕೊಡುತ್ತಿದ್ದರು. ಎಷ್ಟೇ ದೂರು ಕೊಟ್ಟರೂ ಭ್ರಷ್ಟರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಚಾಕು ಇರಿದಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಲೋಕಾಯುಕ್ತ ಕಚೇರಿಗೆ ಆಗಮಿಸಿದ ಎಫ್ಎಸ್ಎಲ್ ತಂಡ ಸತತ 40 ನಿಮಿಷಗಳಿಂದ ತಪಾಸಣೆ ನಡೆಸಿದೆ. ಲೋಕಾಯುಕ್ತರ ಖುರ್ಚಿ, ತೇಜರಾಜ್ ಕುಳಿತ ಕುರ್ಚಿಗಳ ಕುರಿತು ತಪಾಸಣೆ ನಡೆಸಿದ್ದಾರೆ. ಲೋಕಾಯುಕ್ತ ಕಚೇರಿಯ ಬಾಗಿಲು, ಬಿದ್ದಿರುವ ರಕ್ತದ ಕಲೆಗಳು, ಟೇಬಲ್ ಮೇಲಿರುವ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕು ಲೋಕಾಯುಕ್ತ ಕಚೇರಿಯಲ್ಲೇ ಇತ್ತು. ಚಾಕುವನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಲೋಕಾಯುಕ್ತಕ್ಕೆ ಹೆಚ್ಚಿನ ಭದ್ರತೆ ನೀಡುವಂತೆ ಉಪಲೋಕಾಯುಕ್ತ ಸುಭಾಷ್ ಅಡಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸರ್ಕಾರ ಕ್ಯಾರೆ ಎಂದಿರಲಿಲ್ಲ. ಈ ಹಿಂದೆ ಬೆಂಕಿ ಹಾಕಿದ್ದಾಗಲೂ ಕೂಡ ಹೆಚ್ಚಿನ ಭದ್ರತೆಗೆ ಮನವಿ ಮಾಡಿದ್ದರೂ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸಿತ್ತು ಎನ್ನಲಾಗಿದೆ.
ಯಾರೀತ ತೇಜರಾಜ್?
ತೇಜರಾಜ್ ಶರ್ಮಾ ಮೂಲತಃ ರಾಜಸ್ಥಾನದ ಕುಟುಂಬದವನು. ಶರ್ಮಾ ತಂದೆ ತುಮಕೂರಿನ ತಿಪಟೂರಿನಲ್ಲಿ ನೆಲೆಸಿದ್ದರು. ಸರ್ಕಾರಿ ಅಧಿಕಾರಿಗಳ ವಿರುದ್ಧ ತೇಜರಾಜ್ ದೂರು ನೀಡುತ್ತಿದ್ದ. ಆದರೆ, ಬಹುತೇಕ ದೂರುಗಳು ಕ್ಲೋಸ್ ಆಗಿದ್ದವು. ತೇಜಸ್ ರಾಜ್ ಶರ್ಮಾ ಪರವಾಗಿ ಲೋಕಾಯುಕ್ತ ತೀರ್ಪು ಬಂದಿರಲಿಲ್ಲ.
ಅಂಬೆಕೃಪಾ 1 ಮಾರ್ಕೆಟರ್ಸ್ ಹೆಸರಿನಲ್ಲಿ ಸರ್ಕಾರಿ ಕಚೇರಿಯಲ್ಲಿ ಫರ್ನೀಚರ್ ಸರಬರಾಜು ಮಾಡ್ತಿದ್ದ ಆರೋಪಿಗೆ ಇತ್ತೀಚೆಗೆ ಸರ್ಕಾರಿ ಕಚೇರಿಯಿಂದ ಟೆಂಡರ್ ಸಿಕ್ಕಿರಲಿಲ್ಲ. ಈ ಕುರಿತು 18 ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ. ಇದೇ ವಿಚಾರಕ್ಕೆ ಲೋಕಾಯುಕ್ತಕ್ಕೆ ಬಂದಿದ್ದ.
ಮಹಿಳಾ ಆಯೋಗ, ಹಣಕಾಸು ಇಲಾಖೆ, ಶಿಕ್ಷಣ, ಆಹಾರದ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ವಂಚನೆ ಆಗುತ್ತಿದೆ. 4 ಕೋಟಿ ರೂ. ಹಗರಣ ನಡೆದಿದೆ ಎಂದು ದೇವರಾಜು, ಮಹಾಲಿಂಗಪ್ಪ, ಮಂಜುನಾಥ್, ಶಿವಕುಮಾರ್, ಡಾ.ಚಂದ್ರಪ್ಪ, ಎ.ಆರ್. ಚಂದ್ರಶೇಖರ್, ಪ್ರಭಾಕರ್ ಮತ್ತು ಕುಮಾರ್ ಎಂಬವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ.
ಇತ್ತೀಚೆಗಷ್ಟೇ ತುಮಕೂರು ರೇಷ್ಮೆ ಇಲಾಖೆಯಲ್ಲಿನ ಹಗರಣದ ಬಗ್ಗೆ ದೂರು ನೀಡಿದ್ದ ತೇಜರಾಜ್ ಶರ್ಮಾ, ಅದರಲ್ಲಿ ನ್ಯಾಯ ಸಿಗುವ ವಿಶ್ವಾಸ ಹೊಂದಿದ್ದ. ಇದುವರೆಗೂ ತೇಜಸ್ ಆರ್ ಎನ್ನುವ ಹೆಸರಿನಲ್ಲಿ 5 ದೂರು ದಾಖಲಿಸಿದ್ದ.
ಇನ್ನು ತುಮಕೂರಿನ ಬಿದಿರುಮಳೆ ತೋಟದಲ್ಲಿ ವಾಸವಿದ್ದ ಆರೋಪಿ ತೇಜರಾಜ್ ಮನೆಗೆ ಎಸ್ಪಿ ದಿವ್ಯಾ ಗೋಪಿನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಹತ್ಯೆ ಯತ್ನ ಘಟನಾವಳಿ
ಮಧ್ಯಾಹ್ನ 12.45ಕ್ಕೆ ಲೋಕಾಯುಕ್ತ ಕಚೇರಿಗೆ ಎಂಟ್ರಿ
ಬಳಿಕ ಲೆಡ್ಜರ್ ಬುಕ್ನಲ್ಲಿ ಸಹಿ ಮಾಡಿದ ತೇಜರಾಜ್
ನಂತರ ಕಟ್ಟಡದ 3ನೇ ಫ್ಲೋರ್ಗೆ ತೇಜರಾಜ್ ಎಂಟ್ರಿ
ಮಧ್ಯಾಹ್ನ 1.34ರ ವೇಳೆಗೆ 2ನೇ ಫ್ಲೋರ್ಗೆ ಆಗಮನ
2ನೇ ಫ್ಲೋರ್ನಲ್ಲಿರುವ ಲೋಕಾಯುಕ್ತರ ಕಚೇರಿ
ಈ ವೇಳೆ ಗನ್ಮಾನ್ಗೆ ಚೀಟಿ ನೀಡಿ ಮಧ್ಯಾಹ್ನ 1.38ರ ವೇಳೆಗೆ ಲೋಕಾಯುಕ್ತ ಕಚೇರಿಯೊಳಗೆ ಎಂಟ್ರಿ
ಪತ್ರವನ್ನು ನ್ಯಾ.ವಿಶ್ವನಾಥ ಶೆಟ್ಟಿಗೆ ನೀಡಿದ ತೇಜರಾಜ್
ಬಳಿಕ ನ್ಯಾ.ವಿಶ್ವನಾಥ ಶೆಟ್ಟಿ ಎಡಗೈಗೆ ಚಾಕುವಿನಿಂದ ಇರಿತ
ನಂತರ ಟೇಬಲ್ಗೆ ಚಾಕುವಿನಿಂದ ಕುಟ್ಟಿದ ತೇಜರಾಜ್
ಮತ್ತೆ ನ್ಯಾ.ವಿಶ್ವನಾಥ ಶೆಟ್ಟಿಗೆ ಚಾಕುವಿನಿಂದ ಇರಿತ
ಒಟ್ಟು 5 ಬಾರಿ ಚಾಕುವಿನಿಂದ ಇರಿದ ತೇಜರಾಜ್ ಶರ್ಮಾ
ಈ ವೇಳೆ ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಕಿರುಚಾಟ
ಕಿರುಚಾಟ ಕೇಳಿ ಒಳಗೆ ಬಂದ ಹೊರಗಿನವರು
ಆರೋಪಿ ತೇಜರಾಜ್ ಶರ್ಮಾನನ್ನು ವಶಕ್ಕೆ ಪಡೆದ ಪೊಲೀಸರು
ಈ ಘಟನೆಯೆಲ್ಲಾ ನಡೆದಿದ್ದು ಕೇವಲ 9ರಿಂದ 10 ನಿಮಿಷದಲ್ಲಿ
ಚಾಕುವನ್ನ ಹಿಂದಿನ ಪಾಕೆಟ್ನಲ್ಲಿ ಇಟ್ಟುಕೊಂಡು ಹೋಗಿದ್ದ ಆರೋಪಿ
KA01 G 6071 ನಂಬರ್ ಕಾರ್ನಲ್ಲಿ ನ್ಯಾ.ವಿಶ್ವನಾಥ ಶೆಟ್ಟಿಯನ್ನು ಆಸ್ಪತ್ರೆಗೆ ರವಾನಿಸಿದ್ದ ಕಚೇರಿ ಸಿಬ್ಬಂದಿ
2ನೇ ಮಹಡಿಯಿಂದ ಲಿಫ್ಟ್ನಲ್ಲಿ ಹೊರಗಡೆ ತಂದ ಸಿಬ್ಬಂದಿ
ಬಳಿಕ ವ್ಹೀಲ್ ಚೇರ್ ಮೂಲಕ ಕಾರ್ ಬಳಿ ಕರೆತಂದಿದ್ರು
ಎಫ್ಎಸ್ಎಲ್ ಅಧಿಕಾರಿಗಳಿಂದ ಕಾರು ತಪಾಸಣೆ
ಮಲ್ಯ ಆಸ್ಪತ್ರೆಯ ಡಾ.ಆನಂದ್ ನೇತೃತ್ವದ ವೈದ್ಯರ ತಂಡದಿಂದ ಚಿಕಿತ್ಸೆ
ನ್ಯಾ.ವಿಶ್ವನಾಥ ಶೆಟ್ಟಿ ಪ್ರಾಣಾಪಾಯದಿಂದ ಪಾರು
ಆರೋಗ್ಯ ಸ್ಥಿರವಾಗಿದ್ದು, ಮುಂದುವರಿದ ಚಿಕಿತ್ಸೆ
Comments are closed.