ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮಹಮದ್ ನಲಪಾಡ್ ಮತ್ತು ತಂಡದ ಗೂಂಡಾಗಿರಿ ಪ್ರಕರಣದಲ್ಲಿ ಹಲ್ಲೆಗೊಳಗಾದ ವಿದ್ವತ್ ಹೇಳಿಕೆಯನ್ನು ಸಿಸಿಬಿ ಪೊಲೀಸರು ಶನಿವಾರ ದಾಖಲಿಸಿಕೊಂಡಿದ್ದಾರೆ.
ಸತತ 3 ಗಂಟೆಗಳ ಕಾಲ ಸಿಸಿಬಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ವತ್, ಫೆ.17ರಂದು ಐವರು ಸ್ನೇಹಿತರ ಜತೆ ಫರ್ಜಿ ಕೆಫೆಗೆ ಊಟಕ್ಕೆ ತೆರಳಿದ್ದಾಗ ನಡೆದ ಘಟನೆಯನ್ನು ಅವರ ದಾಟಿಯಲ್ಲಿ ಹೀಗೆ ವಿವರಿಸಿದ್ದಾರೆ.
ಕಿಸ್ ಮೈ ಫುಟ್, ಸೇ ಸಾರಿ ಎಂದ ನಲಪಾಡ್
ರಾತ್ರಿ 10.30ಕ್ಕೆ ಹೋಟೆಲ್ನಿಂದ ನಿರ್ಗಮಿಸುವಾಗ ನಲಪಾಡ್ ಮತ್ತು ಸ್ನೇಹಿತರು ಕೆಫೆಗೆ ಬಂದರು. ಫ್ರಾಕ್ಚರ್ ಆಗಿದ್ದ ನನ್ನ ಕಾಲಿಗೆ ನಲಪಾಡ್ ಕಾಲು ಟಚ್ ಆದಾಗ, ಬ್ರದರ್ ನೋಡ್ಕೊಂಡು ಓಡಾಡಿ ಎಂದು ಹೇಳಿದೆ. ಆಗ ನಾನ್ಯಾರು ಗೊತ್ತಾ? ಲೋಕಲ್ ಎಂಎಲ್ಎ ಮಗ ಅಂತಾ ಆವಾಜ್ ಹಾಕಿದ್ರು ಬಳಿಕ ನಿನಗೆ ಗತಿ ಕಾಣಿಸ್ತೀನಿ ಅಂತಾ ಕಪಾಳಕ್ಕೆ ಹೊಡೆದ್ರು. ಅವರ ಸ್ನೇಹಿತರು ಬೈದು ನನ್ನ ಮೇಲೆ ಹಲ್ಲೆ ನಡೆಸಿದ್ರು.
ಇಷ್ಟಾದ ನಂತರವೂ ನಲಪಾಡ್ ‘ಕಿಸ್ ಮೈ ಫುಟ್. ಸೇ ಸಾರಿ’ (ನನ್ನ ಪಾದಕ್ಕೆ ಮುತ್ತಿಟ್ಟ್ಉ ಕ್ಷಮೆ ಕೇಳು), ‘ಐ ವಿಲ್ ಕಿಲ್ ಯೂ’ (ನಿನ್ನ ಕೊಂದು ಬಿಡುತ್ತೇನೆ) ಎಂದು ನನ್ನ ಮೇಲೆ ಹಲ್ಲೆ ಮಾಡಿದರು.
ಬೌನ್ಸರ್ಗಳು ಬಿಡಿಸಿದರು; ಆಸ್ಪತ್ರೆಯಲ್ಲೂ ಧಮ್ಕಿ
ನಲಪಾಡ್ ಸ್ನೇಹಿತರು ನನಗೆ ಗಾಜಿನ ಮಗ್, ಐಸ್ ಮಗ್ ಮತ್ತು ಬಿಯರ್ ಬಾಟಲ್ಗಳಿಂದ ಹೊಡೆಯುತ್ತಿದ್ದಾಗ ಬೌನ್ಸರ್ಗಳು ಬಂದು ಥಳಿತದಿಂದ ಬಿಡಿಸಿದರೂ, ಮತ್ತೆ ಮತ್ತೆ ಬಂದು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಅಷ್ಟರಲ್ಲಾಗಲೇ ತೀವ್ರವಾಗಿ ಗಾಯಗೊಂಡಿದ್ದ ನನ್ನನ್ನು ಸ್ನೇಹಿತರು ಮಲ್ಯ ಆಸ್ಪತ್ರೆಗೆ ದಾಖಲಿಸಿದರು. ಆ ವೇಳೆ ಸ್ನೇಹಿತ ಗುರು ರಾಜ್ಕುಮಾರ್ (ರಾಜ್ ಕುಮಾರ್ ಮೊಮ್ಮಗ), ನನ್ನ ಅಣ್ಣ ಸಾತ್ವಿಕ್ಗೆ ಹಲ್ಲೆ ಕುರಿತ ಮಾಹಿತಿ ತಿಳಿಸಿದ. ಆಸ್ಪತ್ರೆ ಸೇರಿ ನಾಲ್ಕೈದು ನಿಮಿಷದಲ್ಲೇ ಎಮರ್ಜೆನ್ಸಿ ವಾರ್ಡ್ಗೆ ಬಂದ ನಲಪಾಡ್ ಗ್ಯಾಂಗ್ ಮತ್ತೆ ಧಮ್ಕಿ ಹಾಕಿದರು.
ಪುನೀತ್ ರಾಜ್ಕುಮಾರ್ ಮೈ ಕ್ಲೋಸ್ ಫ್ರೆಂಡ್
ಆಸ್ಪತ್ರೆಯಲ್ಲಿ ನಲಪಾಡ್ ನನಗೆ ಧಮ್ಕಿ ಹಾಕುತ್ತಿರುವಾಗ ‘ ಅಣ್ಣ ಸಾತ್ವಿಕ್ ಸ್ಥಳಕ್ಕೆ ಬಂದರು. ನಲಪಾಡ್ ಅವನ ಜತೆಯೂ ಜಗಳವಾಡಿ ಆತನನ್ನೂ ಸಾಯಿಸ್ತೀವಿ ಎಂದು ಬೆದರಿಕೆ ಹಾಕಿದರು. ಆಗ ಗುರು ರಾಜ್ಕುಮಾರ್ ಮಧ್ಯ ಪ್ರವೇಶಿಸಿ, ನಾನು ರಾಜ್ಕುಮಾರ್ ಮೊಮ್ಮಗ, ಇದೆಲ್ಲಾ ಸರಿ ಇರುವುದಿಲ್ಲ ಎಂದು ಹೇಳಿದಾಗ ನಲಪಾಡ್, ‘ಬ್ರದರ್ ಐ ನೋ ಪುನೀತ್ರಾಜ್ಕುಮಾರ್. ಮೈ ವೆರಿ ಕ್ಲೋಸ್ ಫ್ರೆಂಡ್’ ಎಂದು ಹೊರಟು ಹೋದರು.
Comments are closed.