ಕರ್ನಾಟಕ

ಪ್ರತ್ಯೇಕ ಲಿಂಗಾಯತ ಧರ್ಮ; ತಜ್ಞರ ವರದಿ ಶೀಘ್ರವೇ ಕೇಂದ್ರಕ್ಕೆ ಶಿಫಾರಸ್ಸಿಗೆ ಮುರುಘಾಶ್ರೀಗಳ ಒತ್ತಾಯ

Pinterest LinkedIn Tumblr


ದಾವಣಗೆರೆ: ಪ್ರತ್ಯೇಕ ಲಿಂಗಾಯಿತ ಧರ್ಮ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿಯನ್ನು ಸಿಎಂ ಸಿದ್ದರಾಮಯ್ಯ ಆದಷ್ಟು ಬೇಗ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮುರುಘಾ ಶರಣರು ಒತ್ತಾಯಿಸಿದರು.

ನಗರದ ಶಿವಯೋಗಾಶ್ರಮದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮಿತಿ ನೀಡಿರುವ ವರದಿಯನ್ನು ನಾನು ಸ್ವಾಗತ ಮಾಡುತ್ತೇನೆ. ಸಿದ್ದರಾಮಯ್ಯನವರ ದಿಟ್ಟ ನಿರ್ಧಾರಕ್ಕೆ ನಮ್ಮ ಪ್ರಶಂಸೆ ಇದೆ. ಕರ್ನಾಟಕ ನೆಲದಲ್ಲಿ ಧರ್ಮ ಸಮಾಜದ ಕ್ರಾಂತಿ ನಡೆದಿದ್ದು, ಕನ್ನಡಿಗರಿಗೆ, ಅನಿವಾಸಿ ಭಾರತೀಯರಿಗೆ, ವಿದೇಶದಲ್ಲಿರುವ ಲಿಂಗಾಯಿತರಿಗೆ ಸಂತಸ ತಂದಿದೆ.

ಅಂದಿನ ಅಲಕ್ಷಿತರು ಇಂದಿನ ದಲಿತರಾಗಿದ್ದಾರೆ. ಸಮಾಜದ ಅಂಕುಡೊಂಕು ಗಳನ್ನ ನಿಭಾಯಿಸಲು ಸ್ವತಂತ್ರ ಧರ್ಮ ಬೇಕಾಗಿದೆ. ಅನೇಕರು ಪ್ರಾಚೀನತೆಗೆ ಒತ್ತು ನೀಡುತ್ತಿದ್ದಾರೆ. ಕೆಲವರಿಗೆ ಪ್ರಾಚೀನತೆ ಮುಖ್ಯ. ಇನ್ನು ಕೆಲವರಿಗೆ ಪ್ರಯೋಗ ಶೀಲತೆ ಮುಖ್ಯ. ಪ್ರಾಚೀನ್ಯತೆ ಬೇಕಾದವರು ಇಟ್ಟುಕೊಂಡರೂ ಪರವಾಗಿಲ್ಲ. ಸ್ಥಾನ ಮಾನಕ್ಕಾಗಿ ಜಿಗ್ನಾಸೆಗಳು ಉಂಟಾಗುವುದು ಸಾಮಾನ್ಯವಾಗಿದ್ದು, ಪ್ರತಿಯೊಬ್ಬರು ಅಭಿಪ್ರಾಯವನ್ನು ಮಂಡಿಸಬಹುದಾಗಿದೆ. ಇದಕ್ಕೆ ನಮ್ಮ ವಿರೋಧ ಇಲ್ಲ ಎಂದು ತೀಕ್ಷ್ಣವಾಗಿ ಕುಟುಕಿದರು.

ನ್ಯಾಯಾಲಯಕ್ಕೆ ತಲೆ ಬಾಗಬೇಕು…

900 ವರ್ಷಗಳ ಇತಿಹಾಸವಿರುವ ನಮ್ಮ ಧರ್ಮಕ್ಕೆ ಈಗ ಫಲ ಸಿಗಲು ಆರಂಭವಾಗಿದೆ. ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಈ ವರದಿಯನ್ನು ಕಾನೂನಿನ ವ್ಯಾಪ್ತಿಯಲ್ಲಿ ಸಲ್ಲಿಸಲಾಗಿದೆ. ಆದರೆ ಪ್ರಕರಣ ಕೋರ್ಟ್‌ ನಲ್ಲಿದೆ. ನಾವೆಲ್ಲರೂ ನ್ಯಾಯಾಲಯಕ್ಕೆ ತಲೆಬಾಗಲೇಬೇಕೆಂದು ಶರಣರು ಹೇಳಿದರು.

ರಾಜಕೀಯ ಮಾಡಬೇಡಿ…
ರಾಜಕಾರಣಿಗಳು ರಾಜಕೀಯಕ್ಕಾಗಿ ಪ್ರತ್ಯೇಕ ಲಿಂಗಾಯತ ಹೋರಾಟವನ್ನು ರಾಜಕೀಯಗೊಳಿಸಿ ಹಗ್ಗ ಜಗ್ಗಾಟ ಮಾಡುತ್ತಿದ್ದಾರೆ. ಆದರೆ ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಲಿಂಗಾಯಿತರನ್ನು ಮತ ಬ್ಯಾಂಕ್‌ಗಳಾಗಿ ಯಾರೊಬ್ಬ ರಾಜಕಾರಣಿ ಪರಿಗಣಿಸಬಾರದು. ನಮ್ಮ ಹೋರಾಟದಲ್ಲಿ ರಾಜಕೀಯ ಬೆರೆಸಬಾರದು. ಎಲ್ಲ ರಾಜಕಾರಣಿಗಳು ಸಹಕಾರ ನೀಡಬೇಕು. ಬಸವಣ್ಣನವರ ಕ್ರಾಂತಿಯನ್ನು ರಾಜಕಾರಣಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು.

ಮುಕ್ತ ಅವಕಾಶ…
ಲಿಂಗಾಯಿತ ಧರ್ಮದಲ್ಲಿ 92 ಉಪಜಾತಿ ಇದ್ದು, ಅದರಲ್ಲಿ ವೀರಶೈವ ಪಂಗಡವೂ ಒಂದಾಗಿದೆ. ವೀರಶೈವರು ನಮ್ಮ ಜೊತೆಗೆ ಬರಲು ಮುಕ್ತ ಅವಕಾಶವಿದೆ. ಪಂಚಪೀಠದವರು ಅವರಿಗೆ ಹೇಗೆ ತಿಳಿಯುತ್ತೋ ಹಾಗೇ ಮಾಡಲಿ. ವೇದ, ವಚನಗಳಲ್ಲಿ ವ್ಯತ್ಯಾಸವಿದ್ದು ಮೊದಲು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮುರುಘಾ ಶರಣರು ಹೇಳಿದರು.

ಹೋರಾಟ ನಿರಂತರ…
ಅಖಿಲ ಭಾರತ ವಿರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಚುನಾವಣೆ ಇರುವವರೆಗೂ ಮಾತ್ರ ಈ ಹೋರಾಟ ಎಂಬ ಪ್ರಶ್ನೆಗೆ ಉತ್ತರಿಸಿದ ಶರಣರು, ನಮ್ಮ ಹೋರಾಟ ನಿರಂತರವಾಗಿದ್ದು, ಚುನಾವಣೆ ಮುಗಿದ ಮೇಲೂ ಮತ್ತೊಮ್ಮೆ ಸಭೆ ಸೇರಿ ಚರ್ಚೆ ಮಾಡುತ್ತೇವೆ. ಮತ್ತೆ ಹೋರಾಟ ಶುರುವಾಗುತ್ತದೆ. ಚುನಾವಣೆಗೂ , ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.

Comments are closed.