ಕರ್ನಾಟಕ

ಮಾಂಸ ಸೇವಿಸಿ ದೇಗುಲ ಪ್ರವೇಶ: ಬಿಜೆಪಿ ಆರೋಪಕ್ಕೆ ರಾಹುಲ್ ಗಾಂಧಿ ಹೇಳಿದ್ದೇನು ?

Pinterest LinkedIn Tumblr

ಕಲಬುರಗಿ; ಮಾಂಸಾಹಾರ ಸೇವಿಸಿ ಕೊಪ್ಪಳದ ಕನಕಗಿರಿ ಕನಕಾಚಲಪತಿ ದೇವರ ದರ್ಶನ ಮಾಡಿದ್ದಾರೆಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆರೋಪವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ತಳ್ಳಿಹಾಕಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿಯವರು, ಬಿಜೆಪಿ ನಾಯಕರ ಆರೋಪ ಆಧಾರ ರಹಿತವಾದದ್ದು. ಪ್ರಸ್ತುತ ಅವರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು. ಕನಕಗಿರಿಯಲ್ಲಿ ದೇವರ ದರ್ಶನಕ್ಕೆ ಹೋಗುವ ಮುನ್ನ ನಾನು ಯಾವುದೇ ಮಾಂಸಾಹಾರ ಸೇವನೆ ಮಾಡಿರಲಿಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದವರು ಈ ದೇಶದಲ್ಲಿ ಎಲ್ಲವನ್ನು ತಮ್ಮ ಚಿಂತನೆಯ ಹಿನ್ನೆಲೆಯಾಗಿಟ್ಟುಕೊಂಡೇ ನೋಡುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಜನ ನಂಬುವುದಿಲ್ಲ ಎಂದು ಹೇಳಿದ್ದಾರೆ.

ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಮೊದಲು ಯಾರು ನಿಜವಾದ ಹಿಂದುಗಳು ಹಾಗೂ ಯಾರು ನಕಲಿ ಹಿಂದುಗಳು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕಾಂಗ್ರಸ್ ನಾಯಕರ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ, ಕಾಂಗ್ರೆಸ್ ನಾಯಕರು ನಕಲಿ ಹಿಂದೂಗಳು. ಹಿಂದೂಗಳ ಭಾವನೆಗಳಿಗೆ ಹಾಗೂ ನಂಬಿಕೆಗಳನ್ನು ಅವರು ಗೌರವಿಸುವುದಿಲ್ಲ. ಚುನಾವಣೆಗಳು ಬಂದಾಗ ಮಾತ್ರ ದೇಗುಲಗಳಿಗೆ ಭೇಟಿ ನೀಡುತ್ತಾರೆಂದು ಹೇಳಿದ್ದರು.

4 ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿಯವರು ಹಲವು ದೇಗುಲಗಳು ಹಾಗೂ ಮಠಗಳಿಗೆ ಭೇಟಿ ನೀಡಿದ್ದರು. ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಳಕೆ ಮಾಡಿದ್ದ ತಂತ್ರಗಳನ್ನು ಇದೀಗ ಕಾಂಗ್ರೆಸ್ ರಾಜ್ಯದಲ್ಲೂ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದು, ಹಿಂದೂಗಳ ಮತಗಳನ್ನು ಆಕರ್ಷಿಸಲು ಯತ್ನ ನಡೆಸುತ್ತಿದೆ.

Comments are closed.