ಕರ್ನಾಟಕ

ಓಬಳಾಪುರಂ ಮೈನಿಂಗ್: 9 ವರ್ಷದಿಂದ ವಿಚಾರಣೆಗೆ ಕಾಯುತ್ತಿರುವ ಎಂಜಿನಿಯರ್‌

Pinterest LinkedIn Tumblr


ಬೆಂಗಳೂರು: ಬಳ್ಳಾರಿಯಲ್ಲಿ ಓಬಳಾಪುರಂ ಮೈನಿಂಗ್ ಕಂಪೆನಿ ನಡೆಸಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಪ್ರಮುಖ ಸಾಕ್ಷಿಯಾಗಿರುವ ವ್ಯಕ್ತಿಯೊಬ್ಬರು ಒಂಬತ್ತು ವರ್ಷಗಳಿಂದ ಪ್ರಕರಣದ ವಿಚಾರಣೆಯ ನಿರೀಕ್ಷೆಯಲ್ಲಿದ್ದಾರೆ.

ಗನ್‌ಮನ್‌ ಭದ್ರತೆಯಲ್ಲಿರುವ ಕಂಪೆನಿಯ ಮಾಜಿ ಡೆಪ್ಯುಟಿ ಮ್ಯಾನೇಜರ್‌, ಉನ್ನತ ಶ್ರೇಣಿಯ ಎಂಜಿನಿಯರ್‌ ವಿ. ಆಂಜನೇಯ ಒಂದು ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿದ್ದಾರೆ. ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ಏನಾದರೂ ಪ್ರಗತಿಯಾಗುವುದೇ ಎಂಬ ಅವರ ಕಾಯುವಿಕೆ ಜೀವ ಬೆದರಿಕೆಗಳ ಮಧ್ಯೆಯೇ ಮುಂದುವರಿದಿದೆ.

ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಯನ್ನು ಆರಂಭದಲ್ಲಿ ಸಿಬಿಐ ನಡೆಸಿತ್ತು. ಲೋಕಾಯುಕ್ತ ವಿಶೇಷ ತನಿಖಾ ತಂಡ 72 ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. ಸಿಬಿಐ ಕೆಲವು ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ಪ್ರಮುಖ ಆರೋಪಿ ಜನಾರ್ದನ ರೆಡ್ಡಿಗೆ ಕ್ಲೀನ್ ಚಿಟ್‌ ನೀಡಿದೆ.

ಆದರೆ ಆರಂಭದಲ್ಲೇ ಅಂದರೆ 2009 ರಲ್ಲೇ ದಾಖಲಾಗಿರುವ ಪ್ರಕರಣಗಳು ಅಲ್ಲಿಂದ ಮುಂದಕ್ಕೆ ಹೋಗಿಲ್ಲ. ಆಂಜನೇಯ ಅವರು ಜನಾರ್ದನ ರೆಡ್ಡಿ ಅವರ ಕಂಪೆನಿಯಲ್ಲಿ 2004 ರಿಂದ 2009 ಉನ್ನತ ಶ್ರೇಣಿಯ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸಿದ್ದರು.

ಅಕ್ರಮ ಗಣಿಗಾರಿಕೆ ಹಗರಣ ಬೆಳಕಿಗೆ ಬಂದ ಬಳಿಕ ಆಂಜನೇಯ ಅವರು ರೆಡ್ಡಿ ಬಳಗ ತೊರೆದಿದ್ದು, ಪ್ರಕರಣದ ಮಾಫಿ ಸಾಕ್ಷಿಯಾಗಿದ್ದಾರೆ. ಅನಂತರ ಬಳ್ಳಾರಿ ಮತ್ತು ಬೆಂಗಳೂರುಗಳಲ್ಲಿ ಅವರ ಮೇಲೆ ಹಲ್ಲೆ ಕೂಡ ನಡೆದಿತ್ತು. ಇದಕ್ಕಾಗಿ ರಾಜ್ಯ ಮಾನವ ಹಕ್ಕುಗಳ ಆಯೋಗ ಅವರಿಗೆ ಭದ್ರತೆಗೆ ಗನ್‌ಮನ್‌ ಒದಗಿಸುವಂತೆ ಆದೇಶಿಸಿತ್ತು. ಆದರೆ ಒಂಬತ್ತು ವರ್ಷವಾದರೂ ಪ್ರಕರಣದ ವಿಚಾರಣೆಗೆ ಹಾಜರಾಗಲು ಸಮನ್ಸ್ ಬರಬಹುದೆಂದು ಆಂಜನೇಯ ಕಾಯುತ್ತಿದ್ದರೂ ಪ್ರಯೋಜನವಾಗಿಲ್ಲ. ಆ ಪ್ರಕರಣ ಹೈದರಾಬಾದ್‌ ಸಿಬಿಐ ಕೋರ್ಟ್‌ನಲ್ಲಿದೆ. ಜೀವಬೆದರಿಕೆ ಎದುರಿಸುತ್ತಿರುವ ಆಂಜನೇಯ ಅವರಿಗೆ ಬೆಂಗಳೂರು ಪೊಲೀಸ್‌ ಇಲಾಖೆ ಗನ್‌ಮನ್‌ ನೀಡಿದೆ.

Comments are closed.