ಕರ್ನಾಟಕ

ಪ್ರಧಾನಿ ಕಾರ್ಯಕ್ರಮಕ್ಕೆ ಅರಮನೆ ಮೈದಾನದಲ್ಲಿ ಅದ್ದೂರಿ ಸಿದ್ಧತೆ

Pinterest LinkedIn Tumblr


ಬೆಂಗಳೂರು: ಅರಮನೆ ಮೈದಾನದಲ್ಲಿ ಫೆ. 4ರಂದು ನಡೆಯಲಿರುವ ಬಿಜೆಪಿ ಪರಿವರ್ತನಾ ರ್ಯಾಲಿ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಸಿದ್ಧತೆಗಳು ಅಂತಿಮ ಹಂತ ತಲುಪಿದೆ. ಇದನ್ನು ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ಉದ್ಘಾಟನೆ ಎಂದೂ ಪರಿಗಣಿಸಲು ಬಿಜೆಪಿ ತೀರ್ಮಾನಿಸಿರುವುದರಿಂದ ಸಮಾವೇಶಕ್ಕೆ ಹೊಸ ಕಳೆ ನೀಡಲು ಮುಂದಾಗಿದೆ.

ಕನ್ನಡಪರ ಸಂಘಟನೆಗಳು ಕರೆನೀಡಿರುವ ಬಂದ್‌ ನಡುವೆಯೂ ಸುಮಾರು 4 ಲಕ್ಷ ಮಂದಿಯನ್ನು ಸೇರಿಸಿ ಸಮಾವೇಶ ನಡೆಸಲು ಬಿಜೆಪಿ ತೀರ್ಮಾನಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಹಲವು ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಸಮಿತಿಗಳು ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿದೆ.

ಸಮಾವೇಶ ನಡೆಯಲಿರುವ ಅರಮನೆ ಮೈದಾನದಲ್ಲಿ 20 ಅಡಿ ಎತ್ತರ, 80 ಅಡಿ ಅಗಲ ಮತ್ತು 40 ಅಡಿ ಉದ್ದದ ಬೃಹತ್‌ ವೇದಿಕೆ ಸಿದ್ಧಪಡಿಸಲಾಗುತ್ತಿದೆ ಜತೆಗೆ ದೂರ ಕುಳಿತ ಕಾರ್ಯಕರ್ತರಿಗೆ ನೋಡಲು 20 ಬೃಹತ್‌ ಗಾತ್ರದ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ಸಮಾವೇಶ ಸ್ಥಳ ಪ್ರವೇಶಿಸಿರುವ ಎಲ್ಲಾ ಗೇಟುಗಳಲ್ಲಿ ಸ್ವಾಗತ ಕಮಾನುಗಳನ್ನು ಸಿದ್ಧಗೊಳಿಸಲಾಗುತ್ತಿದ್ದು, ಅರಮನೆ ಸುತ್ತಲೂ ಪಕ್ಷದ ಬ್ಯಾನರ್‌, ಬಂಟಿಂಗ್ಸ್‌ಗಳನ್ನು ಅಳವಡಿಸಲಾಗುತ್ತಿದೆ.

ಭದ್ರತಾ ಉಸ್ತುವಾರಿಗಾಗಿ ಬೆಂಗಳೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿಗೌಡ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಕಾರ್ಯಕರ್ತರನ್ನೊಳಗೊಂಡ ಭದ್ರತಾ ತಂಡ ರಚಿಸಲಾಗಿದ್ದು, ಕಾರ್ಯಕರ್ತರನ್ನು ಸಮಾವೇಶ ಸ್ಥಳಕ್ಕೆ ತಂದುಬಿಡಲಿದೆ. ಅಲ್ಲದೆ, ಕಾರ್ಯಕರ್ತರನ್ನು ವಾಹನ ನಿಲುಗಡೆ ಸ್ಥಳ, ಊಟದ ಸ್ಥಳಗಳಿಗೆ ಕಳುಹಿಸುವ ಕೆಲಸವನ್ನೂ ಮಾಡಲಿದೆ.

ಮೈದಾನದ ಆವರಣದಲ್ಲಿ ತಾತ್ಕಾಲಿಕವಾಗಿ ಮಿನಿ ಆಸ್ಪತ್ರೆ ವ್ಯವಸ್ಥೆ ಮಾಡಲಾಗುತ್ತಿದ್ದು, ಡಾ.ವಾಸುದೇವ್‌ ಮತ್ತು ತಂಡ ಅಗತ್ಯ ಬಿದ್ದವರಿಗೆ ಚಿಕಿತ್ಸೆ ನೀಡಲು ಸಿದ್ಧವಾಗಿರುತ್ತದೆ. ಅಲ್ಲದೆ, ಪಾರ್ಕಿಂಗ್‌ ಸ್ಥಳ, ಊಟದ ಸ್ಥಳ ಸೇರಿದಂತೆ ಸುತ್ತಲೂ ಎರಡು ಹಾಸಿಗೆಗಳ ಎಂಟು ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಉಸ್ತುವಾರಿಗಾಗಿ ನರ್ಸಿಂಗ್‌ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಅಗತ್ಯ ಔಷಧ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.

ಸಂಚಾರ ವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದಂತೆ ವಿಶೇಷ ತಂಡ ರಚಿಸಲಾಗಿದ್ದು, ಮೈದಾನದ ಹೊರಗೆ ಮತ್ತು ಒಳಗೆ ಪೊಲೀಸರೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದೆ. ಜತೆಗೆ ಕಾರ್ಯಕರ್ತರು, ಗಣ್ಯರು ಬರುವ ವಾಹನಗಳ ಪಾರ್ಕಿಂಗ್‌ಗೂ ಸಹಕರಿಸಲಿದೆ.

ಊಟ, ನೀರಿನ ವ್ಯವಸ್ಥೆ
ಸಮಾವೇಶಕ್ಕೆ ಆಗಮಿಸುವ ಲಕ್ಷಾಂತರ ಕಾರ್ಯಕರ್ತರಿಗೆ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ಸಿದ್ಧತೆಗಾಗಿ ಮೈದಾನದ ಅರ್ಧ ಎಕರೆ ಜಾಗದಲ್ಲಿ ನಾಲ್ಕು ಅಡುಗೆ ಮನೆಗಳನ್ನು ನಿರ್ಮಿಸಲಾಗಿದೆ. ಆಹಾರ ಸಿದ್ಧಪಡಿಸಲು 600 ಅಡುಗೆಯವರನ್ನು ನೇಮಿಸಲಾಗಿದೆ. ಅವುಗಳನ್ನು ಕಾರ್ಯಕರ್ತರಿಗೆ ವಿತರಿಸಲು 250 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಸಮಾವೇಶ ನಡೆಯುವ ವೇಳೆ ಕಾರ್ಯಕರ್ತರಿಗೆ ಹಂಚಲು 16 ಲಕ್ಷ ನೀರಿನ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಊಟ ಮತ್ತು ನೀರಿನ ವ್ಯವಸ್ಥೆಗಾಗಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ನೇತೃತ್ವದಲ್ಲಿ 2000 ಕಾರ್ಯಕರ್ತರನ್ನು ನೇಮಿಸಲಾಗಿದೆ.

ಸ್ವತ್ಛತೆಗೆ ಕ್ರಮ
ಬಿಬಿಎಂಪಿ ಸದಸ್ಯ ಮಂಜುನಾಥ್‌ ನೇತೃತ್ವದಲ್ಲಿ ಸ್ವತ್ಛತಾ ತಂಡ ರಚಿಸಲಾಗಿದ್ದು, ಸುಮಾರು 80 ಕಾರ್ಯಕರ್ತರು 200ಕ್ಕೂ ಹೆಚ್ಚು ಖಾಸಗಿ ಸ್ವತ್ಛತಾ ಸಿಬ್ಬಂದಿ ನೆರವಿನೊಂದಿಗೆ ಸ್ವತ್ಛತೆ ಬಗ್ಗೆ ಗಮನಹರಿಸಲಿದ್ದಾರೆ. ಮೈದಾನದಲ್ಲಿ 250 ಮೂತ್ರಾಲಯ, 75 ಇ-ಟಾಯ್ಲೆಟ್‌ಗಳನ್ನು ಅಳವಡಿಸಲಾಗುತ್ತದೆ. ಸಮಾವೇಶದ ವೇಳೆ 85 ಟನ್‌ ತ್ಯಾಜ್ಯ ಉತ್ಪತ್ತಿಯಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ಅದನ್ನು ತೆರವುಗೊಳಿಸಲು 42 ಆಟೋ ಟಿಪ್ಪರ್‌, 6ರಿಂದ 7 ಕಾಂಪಾಕ್ಟರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಕಸ ಹಾಕಲು 5000 ಕಂಟೈನರ್‌ಗಳನ್ನು ಇಡಲಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ
ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶ ಕುರಿತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗಾಗಿ ಬಿಜೆಪಿ ವಿಶೇಷ ನೋಂದಣಿ ಪ್ರಕ್ರಿಯೆ ನಡೆಸಿದ್ದು, ಈಗಾಗಲೇ 12,500 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ 200 ಮಂದಿಯನ್ನು ಗುರುತಿಸಿರುವ ಪಕ್ಷ, ಅವರ ಮೂಲಕ ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ಗ್ಳಲ್ಲಿ ಸಮಾವೇಶವನ್ನು ನೇರ ಪ್ರಸಾರ ಮಾಡಿಸುತ್ತಿದೆ. ಅದಕ್ಕಾಗಿ ಅವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಒದಗಿಸಲಾಗಿದೆ. ಅಲ್ಲದೆ, ಬಿಜೆಪಿಯ ಸಾಮಾಜಿಕ ಜಾತಲಾಣ ಮತ್ತು ಐಟಿ ವಿಭಾಗಗಳೂ ಸಮಾವೇಶವನ್ನು ನೇರ ಪ್ರಸಾರ ಮಾಡಲಿವೆ.

-ಉದಯವಾಣಿ

Comments are closed.