ಹಾವೇರಿ: ಜಿಲ್ಲೆಯ ದೇವರಗುಡ್ಡ ಗ್ರಾಮದ ಗರ್ಭಿಣಿಯೊಬ್ಬರು ಮೃತಪಟ್ಟಿದ್ದಾರೆ ಎಂದು ರಾಣೆಬೆನ್ನೂರು ಸರ್ಕಾರಿ ಹೆರಿಗೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದರಿಂದ ಬುಧವಾರ ಮನೆಗೆ ಕರೆತರಲಾಗಿತ್ತು. ಆದರೆ ಆಕೆಯ ಕುಟುಂಬದವರು ಅಂತ್ಯಸಂಸ್ಕಾರಕ್ಕೆಂದು ತಯಾರಿ ನಡೆಸುತ್ತಿರುವಾಗ ಕಣ್ಣು ತೆರೆದ ಘಟನೆ ನಡೆದಿದೆ.
ದೇವರಗುಡ್ಡ ಗ್ರಾಮದ ನಾಗವೇಣಿ ಯಮನಪ್ಪ ಕೊಡೆರಾ(25ವ) ಗೆ ಹೆರಿಗೆ ನೋವು ಕಾಣಿಸಿಕೊಂಡು ದೇವರಗುಡ್ಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾದಳು,.ಕಳೆದ ಮಂಗಳವಾರ ಮಧ್ಯರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ತೀವ್ರ ರಕ್ತಸ್ರಾವವಾಗಿದ್ದರಿಂದ ನಾಗವೇಣಿಯನ್ನು ರಾಣೆಬೆನ್ನೂರಿನ ಹೆರಿಗೆ ಆಸ್ಪತ್ರೆಗೆ ಮರುದಿನ ಬೆಳಗ್ಗೆ ವರ್ಗಾಯಿಸಲಾಯಿತು. ಕಡಿಮೆ ಬಿಪಿಯಾಗಿ ತಕ್ಷಣವೇ ನಾಗವೇಣಿ ಕುಸಿದುಬಿದ್ದಳು. ಆಗ ಆಸ್ಪತ್ರೆಯ ವೈದ್ಯೆ ಡಾ. ಪ್ರತಿಭಾ ನಾಯಕ್ ನಾಗವೇಣಿ ಮೃತಪಟ್ಟಿದ್ದಾಳೆಂದು ಹೇಳಿದರು.
ದೇಹವನ್ನು ಮನೆಗೆ ತೆಗೆದುಕೊಂಡು ಹೋದ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ನಾಗವೇಣಿ ಕಣ್ಣು ತೆರೆದು ಮುಚ್ಚುತ್ತಿರುವುದನ್ನು ಕಂಡರು. ಅಲ್ಲದೆ ಬೆರಳುಗಳನ್ನು ಕೂಡ ಆಡಿಸುತ್ತಿದ್ದಳು. ತಕ್ಷಣವೇ ರಾಣೆಬೆನ್ನೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಮೃತಪಟ್ಟಿದ್ದಾಳೆ ಎಂದು ತಿಳಿಸಿದರು.
Comments are closed.