ಕರ್ನಾಟಕ

ಭೀಮಾತೀರದ ಹಂತಕ ಧರ್ಮರಾಜ ಹತ್ಯೆಗೆ 5 ಕೋಟಿ ಸುಫಾರಿ?ತಾಯಿ ಆರೋಪ

Pinterest LinkedIn Tumblr


ವಿಜಯಪುರ: ಸಾಹುಕಾರ್ ಜತೆ ಸೇರಿ ಪೊಲೀಸರು 5 ಕೋಟಿ ಹಣ ಪಡೆದು ನನ್ನ ಮಗನನ್ನು ಕೊಲೆ ಮಾಡಿದ್ದಾರೆಂದು ಪೊಲೀಸ್ ಎನ್ ಕೌಂಟರ್ ಗೆ ಬಲಿಯಾದ ಧರ್ಮರಾಜ್ ತಾಯಿ ವಿಮಲಾಬಾಯಿ ಗಂಭೀರವಾಗಿ ಆರೋಪಿಸುವ ಮೂಲಕ ಪ್ರಕರಣಕ್ಕೆ ತಿರುವು ಸಿಕ್ಕಂತಾಗಿದೆ.

ಮಹದೇವ್ ಸಾಹುಕಾರ ಪೊಲೀಸರಿಗೆ ದೊಡ್ಡ ಮೊತ್ತದ ಹಣ ಕೊಟ್ಟು ನನ್ನ ಮಗನನ್ನು ಕೊಲೆ ಮಾಡಿಸಿದ್ದಾನೆ ಎಂದು ಧರ್ಮರಾಜ್ ತಾಯಿ ಮಾಧ್ಯಮದವರ ಜತೆ ಮಾತನಾಡುತ್ತ ದೂರಿದ್ದಾರೆ.

ಸೋಮವಾರ ಬೆಳಗ್ಗೆ ಚಡಚಣದ ಕೊಂಕಣಗಾಂವ್ ಬಳಿ ಭೀಮಾತೀರದ ಹಂತಕ, ರೌಡಿಶೀಟರ್ ಧರ್ಮರಾಜ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಏತನ್ಮಧ್ಯೆ ಧರ್ಮರಾಜ್ ಪೊಲೀಸರ ಮೇಲೆ ಪ್ರತಿದಾಳಿ ನಡೆಸಿದ ಪರಿಣಾಮ ಚಡಚಣ ಪೊಲೀಸ್ ಠಾಣೆಯ ಪಿಎಸ್ ಐ ಗೋಪಾಲ್ ಹಳ್ಳೂರ್ ಗಾಯಗೊಂಡಿದ್ದರು.

ಗುಂಡಿನ ಚಕಮಕಿಯಲ್ಲಿ ಧರ್ಮರಾಜ ದೇಹಕ್ಕೆ 8 ಗುಂಡು ಹೊಕ್ಕಿತ್ತು. ಸಹಚರ ಶಿವಾನಂದನಿಗೆ 2 ಹಾಗೂ ಪಿಎಸ್ಐ ಹಳ್ಳೂರ್ ಗೆ ಒಂದು ಗುಂಡು ಹೊಕ್ಕಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು. ಧರ್ಮರಾಜ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ.

ಭೀಮಾತೀರದ ಮಲ್ಲಿಕಾರ್ಜುನ್ ಚಡಚಣ ಪುತ್ರ ಧರ್ಮರಾಜ್ ಚಡಚಣ, ಈತ ಪತ್ರಪ್ಪ ಸಾಹುಕಾರ ಹತ್ಯೆ ಮತ್ತು 2014ರಲ್ಲಿ ವಿಜಯಪುರ ಮೇಯರ್ ಅಣ್ಣನ ಮಗ ಫಯಾಜ್ ಎಂಬವರ ಕೊಲೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ. ಈತ ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ.

-ಉದಯವಾಣಿ

Comments are closed.