ಧಾರವಾಡ(ಫೆ.05): 10 ರೂಪಾಯಿ ನಾಣ್ಯ ನಿಷೇಧ ಅನ್ನೋ ಗುಲ್ಲು ಮಧ್ಯ ಕರ್ನಾಟಕಕ್ಕೂ ತಟ್ಟಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ಬಳಿಕ ಧಾರವಾಡದಲ್ಲೂ ನಕಲಿ ನಾಣ್ಯ ಅನ್ನೋ ವದಂತಿ ಹಬ್ಬಿದೆ. ಆದರೆ, 10 ರೂಪಾಯಿ ನಾಣ್ಯ ನಿಷೇಧವಾಗಿಲ್ಲ. ಆಗುವುದೂ ಇಲ್ಲ. ಆತಂಕ ಬೇಡ ಅಂತಿದ್ದಾರೆ ಬ್ಯಾಂಕ್ ಅಧಿಕಾರಿಗಳು.
ಧಾರವಾಡದಲ್ಲೂ 10 ರೂ.ನಾಣ್ಯ ನಿಷೇಧ ವದಂತಿ: ನಾಣ್ಯ ನಿಷೇಧವಾಗಿಲ್ಲ, ಆಗುವುದೂ ಇಲ್ಲ
ಧಾರವಾಡದ ಮಾರುಕಟ್ಟೆಯಲ್ಲಿ ನಿತ್ಯವೂ ವ್ಯಾಪಾರಿ ಮತ್ತು ಗ್ರಾಹಕನ ನಡುವೆ 10 ರೂಪಾಯಿ ನಾಣ್ಯದ ವಾಗ್ವಾದ ನಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8 ರಂದು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ನಡೆದು ಹೋಯಿತು. ಅದಾಗಿ ತಿಂಗಳುಗಳೇ ಕಳೆದರೂ ಇದುವರೆಗೂ ಮುಂಚಿನ ಪರಿಸ್ಥಿತಿ ಬಂದಿಲ್ಲ. ಇದೇ ವೇಳೆ ಹತ್ತು ರೂಪಾಯಿ ನಾಣ್ಯದ ಮತ್ತೊಂದು ಸಮಸ್ಯೆ ತಲೆ ಎತ್ತಿ ಕೂತಿದ್ದು ವ್ಯಾಪಾರಿಗಳ ನಿದ್ದೆಗೆಡಿಸಿದೆ. ಅದರಲ್ಲೂ ಚಿಲ್ಲರೆ ವ್ಯಾಪಾರಿಗಳಂತೂ ಈ ಸಮಸ್ಯೆಯಿಂದ ಕಂಗಾಲಾಗಿದ್ದಾರೆ.
10 ರೂ.ನಾಣ್ಯದ ಬಗ್ಗೆ ಆತಂಕ ಬೇಡ
ವ್ಯಾಪಾರಿಗಳು ಗ್ರಾಹಕರಿಂದ ನಾಣ್ಯವನ್ನೇನೋ ಪಡೆಯುತ್ತಿದ್ದಾರೆ. ಆದರೆ, ಚಿಲ್ಲರೆ ಕೊಡುವಾಗ ಈ ನಾಣ್ಯವನ್ನು ಗ್ರಾಹಕರು ಸ್ವೀಕರಿಸುತ್ತಿಲ್ಲ. ನಾಣ್ಯಗಳನ್ನು ಜಮಾ ಮಾಡಲು ಹೋದರೆ, ಎಣಿಸೋ ಸಮಸ್ಯೆ ಅಂತ ಬ್ಯಾಂಕ್ ಸಿಬ್ಬಂದಿ ನೆಪವೊಡ್ಡಿ, ಈ ನಾಣ್ಯಗಳನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ..
ಕೋಲಾರ, ಆನೇಕಲ್’ನಲ್ಲೂ ವದಂತಿ
ಇನ್ನು ಕಳ್ದ ನಾಲ್ಕೈದು ದಿನಗಳಿಂದ ಕೋಲಾರದ ಗಡಿ ಭಾಗವಾದ ಬಂಗಾರಪೇಟೆಯಲ್ಲೂ ಇಂಥದೇ ಸಮಸ್ಯೆ ಉಂಟಾಗಿತ್ತು. ವ್ಯಾಪಾರಿ, ಗ್ರಾಹಕ, ಬಸ್ ಕಂಡಕ್ಟರ್, ಬ್ಯಾಂಕ್ ಸಿಬ್ಬಂದಿ ಕೂಡ 10ರೂಪಾಯಿ ನಾಣ್ಯ ಸ್ವೀಕರಿಸುತ್ತಿರಲಿಲ್ಲ. ತಮಿಳ್ನಾಡಿನ ಗಡಿಯ ಆನೇಕಲ್ ಪಟ್ಟಣದಲ್ಲೂ ಇದೇ ಅವಾಂತರವಾಗಿತ್ತು. ಇದೀಗ ಧಾರವಾಡಕ್ಕೂ ಕಾಯಿನ್ ಬ್ಯಾನ್ ವದಂತಿ ಕಾಲಿಟ್ಟಿದೆ. ಅಸಲಿಗೆ, 10 ರೂ.ನಾಣ್ಯ ನಿಷೇಧವಾಗಿಲ್ಲ. ಆಗುವುದೂ ಇಲ್ಲ. ಈ ನಾಣ್ಯದ ಬಗ್ಗೆ ಆತಂಕವೂ ಬೇಡ. ಆದರೆ, ಗುಸುಗುಸು ಹಬ್ಬಿಸುವ ಮಂದಿಯ ಮೇಲೆ ಕಣ್ಣಿಡಬೇಕಾದ ಸ್ಥಿತಿ ಸೃಷ್ಟಿಯಾಗಿರುವುದು ದುರಂತ.
ಕರ್ನಾಟಕ
Comments are closed.