ಬೆಂಗಳೂರು(ಜ.21): ರಾಜ್ಯ ಭಾರತೀಯ ಜನತಾ ಪಾರ್ಟಿಯಲ್ಲಿ ಇಷ್ಟು ದಿನ ಈಶ್ವರಪ್ಪ ವರ್ಸಸ್ ಯಡಿಯೂರಪ್ಪ ಎನ್ನುವಂತಿತ್ತು. ಇದೀಗ ಸೋಮಣ್ಣ ಕೂಡ ಪರಮಾಪ್ತ ಬಿಎಸ್ವೈ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಅದೂ ಬಿಜೆಪಿ ರಾಜ್ಯಾಧ್ಯಕ್ಷರದ್ದು ಹಿತ್ತಾಳೆಕಿವಿ ಎನ್ನುವ ಮಟ್ಟಿಗೆ ಸಿಟ್ಟು ಯಾಕೆ ಕೇಸರಿ ಪಡೆಯ ಪರಿಷತ್ ಸದಸ್ಯರು ಹೀಗೆಂದರು..? ಕೊಟ್ಟ ಸ್ಪಷ್ಟನೆ ಏನು ಎಂಬುವುದಕ್ಕೆ ಇಲ್ಲಿದೆ ಉತ್ತರ.
ಯಡಿಯೂರಪ್ಪರದ್ದು ಹಿತ್ತಾಳೆ ಕಿವಿ.. ಬದಲಾಗಬೇಕು: ಈಶ್ವರಪ್ಪ ಆಯ್ತು, ಇದೀಗ ಸೋಮಣ್ಣ ಸರದಿ
ಹೀಗೆಂದು ಹೇಳಿದ್ದು ಮಾಜಿ ಸಚಿವ, ಬಿಜೆಪಿ ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ. ಬೆಳಗ್ಗೆ ವಿಧಾನಸೌಧಕ್ಕೆ ಬಂದವರು ಮಾಧ್ಯಮಗಳಿಗೆ ಎದುರಾಗಿ ಮುಕ್ತವಾಗಿ ಮಾತಾಡಿದರು. ನಾನು ಕಾಂಗ್ರೆಸ್ ಸೇರಲ್ಲ ಎಂದೇ ಮಾತನ್ನು ಆರಂಭಿಸಿದ ಮಾಜಿ ಸಚಿವರು, ಯಡಿಯೂರಪ್ಪ ವಿರುದ್ಧವೂ ಕಿಡಿಕಾರಿದರು. ನನಗೆ ಬಿಜೆಪಿ ಎಲ್ಲಾ ಕೊಟ್ಟಿದೆ. ಆದರೆ ಈ ಯಡಿಯೂರಪ್ಪನವರದ್ದು ಮಾತ್ರ ಹಿತ್ತಾಳೆ ಕಿವಿ. ಬದಲಾಗಬೇಕಿದೆ ಅಂತ ಅಂತ ಬೇಸರ ವ್ಯಕ್ತಪಡಿಸಿದ್ರು.
ಇದೇ ವೇಳೆ ರಾಯಣ್ಣ ಬ್ರಿಗೇಡ್ ಕುರಿತಾಗಿಯೂ ಮಾತನಾಡಿದರು. ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಇಬ್ಬರೂ ಶಿವಮೊಗ್ಗದ ಕಿಲಾಡಿಗಳು ಅಂತಲೂ ಸೋಮಣ್ಣ ಕಿಚಾಯಿಸಿದರು. ಇನ್ನು ಕಾಂಗ್ರೆಸ್ ಸೇರ್ಪಡೆ ಎಲ್ಲವೂ ಸುಳ್ಳು ಅಂತಲೂ ಸೋಮಣ್ಣ ಸ್ಪಷ್ಟನೆ ಕೊಟ್ಟರು. ಇದೇ ಸಮಯದಲ್ಲಿ ಸೋಮಣ್ಣ ದೆಹಲಿಗೂ ಹೋಗಿಲ್ಲ., ದಿಗ್ವಿಜಯ್ ಸಿಂಗ್ ಅವರನ್ನೂ ಭೇಟಿಯಾಗಿಲ್ಲ ಅಂತ ಆರ್. ಅಶೋಕ್ ಹೇಳಿದರು.
ಒಟ್ನಲ್ಲಿ ಮಾಘ ಚಳಿಯಲ್ಲಿ ಭಿನ್ನಮತದ ಕಿಚ್ಚು ಬಿಜೆಪಿಯಲ್ಲಿ ಹೆಚ್ಚಾಗಿದೆ. ಈ ಹೊತ್ತಲ್ಲೇ 10 ವರ್ಷದ ಹಿಂದೆ ಬಿಜೆಪಿ ಸೇರಿದ್ದ ಸೋಮಣ್ಣ ಇದೀಗ ಯಡಿಯೂರಪ್ಪ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿರುವುದು ಕೇಸರಿ ಬ್ರಿಗೇಡ್’ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ.
ಕರ್ನಾಟಕ
Comments are closed.