ಕರ್ನಾಟಕ

ಪತ್ನಿಯ ಶೀಲ ಶಂಕಿಸಿ 13 ಬಾರಿ ಇರಿದು ಕೊಂದ ಪತಿ

Pinterest LinkedIn Tumblr

shila
ಮಡಿಕೇರಿ: ಶೀಲ ಶಂಕಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದು ಸ್ವತಃ ತಾನು ಕೂಡ ಕುತ್ತಿಗೆಯನ್ನು ಕೊಯ್ದುಕೊಂಡು ಆಸ್ಪತ್ರೆ ಸೇರಿರುವ ಘಟನೆ ಮೂರ್ನಾಡುವಿನ ಎಂ. ಬಾಡಗ ಗ್ರಾಮದಲ್ಲಿ ಗುರುವಾರ ನಡೆದಿದೆ.

ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಜಹಿರುಲ್ ಇಸ್ಲಾಂ (26) ಎಂಬಾತನೇ ಪತ್ನಿ ಜಹಿರುನ್ನೀಸಾ(24)ಳನ್ನು ಕೊಲೆಗೈದಿರುವ ವ್ಯಕ್ತಿ. ಕಳೆದ ಮೂರು ತಿಂಗಳ ಹಿಂದೆ ಎಂ. ಬಾಡಗ ಗ್ರಾಮದಲ್ಲಿರುವ ಬಾರಿಯಂಡ ಸಂಜನ್ ಅವರ ಕಾಫಿ ತೋಟಕ್ಕೆ ಕೂಲಿ ಕಾರ್ಮಿಕರಾಗಿ ಬಂದು ಲೈನ್ ಮನೆಯಲ್ಲಿ ಇವರು ವಾಸವಾಗಿದ್ದರು.

ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಇಬ್ಬರ ನಡುವೆ ಶೀಲ ಶಂಕಿಸಿ ಆಗಿಂದಾಗ್ಗೆ ಜಗಳವಾಗುತ್ತಿತ್ತು ಎಂದು ಸಂಬಂಧಿಕರು ಹೇಳಿದ್ದಾರೆ. ಬುಧವಾರ ರಾತ್ರಿ ಇಬ್ಬರ ನಡುವೆ ಕಲಹ ಏರ್ಪಟ್ಟು ಗುರುವಾರ ಬೆಳಗ್ಗಿನವರೆಗೆ ಮುಂದುವರೆದಿದೆ. ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಜಗಳ ಅತಿರೇಕಗೊಂಡು ಜಹಿರುಲ್ ಇಸ್ಲಾಂ ಮನೆಯಲ್ಲಿದ್ದ ಕತ್ತಿಯಿಂದ ಪತ್ನಿಯನ್ನು ಕಡಿದು ಕೊಲೆ ಮಾಡಿದ್ದಾನೆ.

ಮುಖ, ಕುತ್ತಿಗೆ, ತಲೆ ಹಾಗೂ ಬೆನ್ನಿನ ಭಾಗ ಸೇರಿದಂತೆ ವಿವಿಧೆಡೆ 13 ಬಾರಿ ಕಡಿಯಲಾಗಿದೆ. ನಂತರ ಆತ ತಾನೇ ತನ್ನ ಕುತ್ತಿಗೆಯನ್ನು ಕತ್ತಿಯಿಂದ ಕತ್ತರಿಸಿಕೊಂಡಿದ್ದಾನೆ. ಗಾಯಾಳುವನ್ನು ಕುಟುಂಬದ ಸಂಬಂಧಿಕರು ಮೈಸೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಪ್ರಭಾರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್, ಡಿವೈಎಸ್ಪಿ ಛಬ್ಬಿ ಹಾಗೂ ಸಿಬ್ಬಂದಿ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.

Comments are closed.