ಬೆಂಗಳೂರು: ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟ್ ಗಳನ್ನು ನಿಷೇಧಿಸಿದ ನಂತರ ಕಪ್ಪುಹಣ ಬಿಳಿ ಮಾಡುವ ದಂಧೆಯಲ್ಲಿ ತೊಡಗಿದ ಆರೋಪ ಎದುರಿಸುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನ ಸಿಬ್ಬಂದಿಯೊಬ್ಬರು ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಿಬಿಐ ದಾಳಿಗೆ ಒಳಗಾಗಿದ್ದ ಬೆಂಗಳೂರು- ಮೈಸೂರು ವೃತ್ತದಲ್ಲಿರುವ ಎಸ್ ಬಿಎಂ ಬ್ಯಾಂಕಿನ ಕ್ಯಾಶ್ ಮ್ಯಾನೇಜಮೆಂಟ್ ಸಿಬ್ಬಂದಿ ರವಿರಾಜ್(65) ಎಂಬುವವರು ಇಂದು ವಿವೇಕನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆಯಷ್ಟೇ ರವಿರಾಜ್ ಅವರ ಮನೆ ದಾಳಿ ನಡೆಸಿದ್ದ ಸಿಬಿಐ, ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ 20 ಲಕ್ಷ ಹಣವನ್ನು ಬದಲಾವಣೆ ಮಾಡಿರುವ ಆರೋಪ ಸಾಬೀತಾಗಿತ್ತು. ಈ ರವಿರಾಜ್ ಅವರನ್ನು ಎಸ್ ಬಿಎಂ ಇಂದು ಸೇವೆಯಿಂದ ಅಮಾನತುಗೊಳಿಸಿತ್ತು.
ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ತಮ್ಮನ್ನು ಕೆಲಸದಿಂದ ತೆಗೆದುಬಿಡುವರೇನೋ ಎಂದು ಭಾವಿಸಿ ಸಿಬ್ಬಂದಿ ರವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಅಲ್ಲದೆ ಅದೇ ಬ್ಯಾಂಕಿನಲ್ಲಿ ಇನ್ನು ಎಷ್ಟು ಜನ ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಸತ್ಯ ಹೊರಬೀಳಬೇಕಿದೆ.
ಕರ್ನಾಟಕ
Comments are closed.