ಬೆಂಗಳೂರು(ಡಿ. 11): ಶಕ್ತಿಸೌಧದಲ್ಲಿ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ್ದಾರೆಂಬ ಆರೋಪದ ಬಗ್ಗೆ ಅಬಕಾರಿ ಸಚಿವ ಹೆಚ್.ವೈ.ಮೇಟಿ ಪ್ರತಿಕ್ರಿಯೆ ನೀಡಿದ್ದು, ತನಗೆ ಈ ವಿಚಾರದ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನಗೆ ಯಾವುದೇ ಆರ್’ಟಿಐ ಕಾರ್ಯಕರ್ತ ಗೊತ್ತಿಲ್ಲ. ಯಾವ ಸಿಡಿ ಬಗ್ಗೆಯೂ ಮಾಹಿತಿ ಇಲ್ಲ. ತನ್ನ ಬೆಂಬಲಿಗರಾರೂ ಯಾರಿಗೂ ಬೆದರಿಕೆ ಹಾಕುವಂತಹವರಲ್ಲ ಎಂದು ಅಬಕಾರಿ ಸಚಿವರು ಪ್ರತಿಕ್ರಿಯಿಸಿದ್ದಾರೆ.
ತನ್ನ ವಿರುದ್ಧ ಯಾರೂ ಪಿತೂರಿ ನಡೆಸುತ್ತಿದ್ದಾರೆಂದ ಮೇಟಿ, ಕಾನೂನಿನಲ್ಲಿ ಯಾರೂ ದೊಡ್ಡವರಲ್ಲ. ಆರ್’ಟಿಐ ಕಾರ್ಯಕರ್ತ ರಾಜಶೇಖರ್ ದೂರು ಕೊಟ್ಟರೆ ಅದನ್ನು ತಾನು ಎದುರಿಸಲು ಸಿದ್ಧ ಹೇಳಿದ್ದಾರೆ.
ಮಹಿಳೆಯೊಂದಿಗೆ ಸಚಿವರು ರಾಸಲೀಲೆ ನಡೆಸಿದ್ದ ಬಗ್ಗೆ ಆರ್’ಟಿಐ ಕಾರ್ಯಕರ್ತ ರಾಜಶೇಖರ್ ಅವರ ಬಳಿ ಸಿಡಿ ಇದೆ ಎನ್ನಲಾಗಿದೆ. ಆ ಸಿಡಿಯನ್ನು ಟಿವಿಯಲ್ಲಿ ಪ್ರಸಾರ ಮಾಡಬಾರದೆಂದು ಸಚಿವ ಮೇಟಿ ಅವರು ರಾಜಶೇಖರ್ ಅವರಿಗೆ ಆಗ್ರಹ ಹಾಕುತ್ತಿದ್ದರೆನ್ನಲಾಗಿದೆ. ಸಚಿವರ ಬೆಂಬಲಿಗರೊಬ್ಬರು ರಾಜಶೇಖರ್ ಅವರಿಗೆ ರಸ್ತೆಯಲ್ಲೇ ಧಮಕಿ ಹಾಕಿದ ಬಗ್ಗೆ ಆಡಿಯೋವೊಂದು ಸುವರ್ಣನ್ಯೂಸ್’ಗೆ ಸಿಕ್ಕಿದೆ.
ಆರು ತಿಂಗಳಿನಿಂದ ಸಚಿವ ಮೇಟಿಯವರು ಶಕ್ತಿಸೌಧದಲ್ಲಿ ಮಹಿಳೆಯೊಂದಿಗೆ ರಾಸಲೀಲೆ ನಡೆಸುತ್ತಿರುವ ಬಗ್ಗೆ ಖುದ್ದು ಆ ಮಹಿಳೆಯೇ ಹೇಳಿರುವುದು ತಿಳಿದುಬಂದಿದೆ. ತನ್ನ ಕೆಲಸ ಆಗದೇ ಹೋದಾಗ ಆ ಮಹಿಳೆ ರಹಸ್ಯವಾಗಿ ದೃಶ್ಯ ಚಿತ್ರೀಕರಿಸಿದ್ದಾಳೆನ್ನಲಾಗಿದೆ. ಆದರೆ, ಆ ಸಿಡಿ ಇನ್ನೂ ಬಹಿರಂಗವಾಗಿಲ್ಲ.
ಸಿಡಿ ಬಿಡುಗಡೆಯಾದರೆ ಸಚಿವರ ರಾಜೀನಾಮೆ?
ಸಚಿವ ಹೆಚ್.ವೈ.ಮೇಟಿ ಅವರ ರಾಸಲೀಲೆ ಪ್ರಕರಣವು ಸಿಎಂ ಸಿದ್ದರಾಮಯ್ಯನರಿಗೆ ತಿಳಿದಿದೆ ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ಸಿಡಿ ಬಹಿರಂಗವಾದರೆ ಮುಖ್ಯಮಂತ್ರಿಗಳು ಅಬಕಾರಿ ಸಚಿವರ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕ
Comments are closed.