ಬೆಂಗಳೂರು: ನೋಟ್ ಬ್ಯಾನ್ ಆದ ಹಿನ್ನೆಲೆಯಲ್ಲಿ ಎಲ್ಲ ದೇವಸ್ಥಾನಗಳ ಹುಂಡಿಗಳು ತುಂಬುತ್ತಿವೆ. ಅಂತೆಯೇ ನಗರದ ಮಲ್ಲೇಶ್ವರಂನ ವೇಣುಗೋಪಾಲ ಸ್ವಾಮಿಯ ದೇವಸ್ಥಾನದ ಹುಂಡಿಯಲ್ಲಿ 24.58 ಸಾವಿರ ರೂ. ಹಣ ಸಂಗ್ರಹವಾಗಿದೆ.
ಮುಜರಾಯಿ ಇಲಾಖೆಯಿಂದ ಇಂದು ಹಣದ ಎಣಿಕೆ ಕಾರ್ಯ ನಡೆದಿದ್ದು, ಇಲ್ಲಿಯೂ ಸಹ ಶ್ರೀಮಂತ ಭಕ್ತರಿದ್ದಾರೆ ಎನ್ನುವುದು ಖಚಿತವಾಗಿದೆ. ಎಣಿಕೆ ಕಾರ್ಯದಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಇದು ದೇಗುಲದ ಇತಿಹಾಸದಲ್ಲಿ ದೊಡ್ಡ ಪ್ರಮಾಣದ ಹುಂಡಿಯಲ್ಲಿ ಸಂಗ್ರಹವಾದ ಹಣವಾಗಿದೆ.
ಒಂಬತ್ತು ತಿಂಗಳಿಂದ ಹುಂಡಿಯನ್ನು ತೆಗೆದಿರಲಿಲ್ಲ. ಹೀಗಾಗಿ ಇಂದು ಹುಂಡಿಯನ್ನು ತೆರೆಯಲಾಗಿತ್ತು. 10 ತಿಂಗಳ ಹಿಂದೆ ಇದೇ ಹುಂಡಿಯಲ್ಲಿ 8 ಲಕ್ಷದ 70 ಸಾವಿರ ಹಣ ಸಿಕ್ಕಿತ್ತು. ಎಣಿಕೆಯ ವೇಳೆ 500 ರೂ. ನೋಟುಗಳಲ್ಲಿ 4 ಲಕ್ಷ ಮತ್ತು 1000 ರೂ. ನೋಟುಗಳಲ್ಲಿ ಒಂದು ಲಕ್ಷ ರೂ. ದೊರೆತಿದೆ. ಇದರ ಜೊತೆಗೆ ಕೆಲವು ವಿದೇಶಿ ಕರೆನ್ಸಿ ಸಹ ಸಿಕ್ಕಿವೆ.
ಕೇಂದ್ರ ಸರ್ಕಾರದ ನೋಟು ಬ್ಯಾನ್ನಿಂದ ಕಪ್ಪುಕುಳಗಳು ತಮ್ಮಲ್ಲಿರುವ ಕಪ್ಪು ಹಣದಿಂದ ಭಕ್ತಿಯನ್ನು ದೇವರಿಗೆ ಸಲ್ಲಿಸಿದ್ದಾರೆ. ಈ ಬಾರಿ ಎಲ್ಲ ದೇವಸ್ಥಾನಗಳ ಹುಂಡಿಯಲ್ಲಿ ಭಾರೀ ಪ್ರಮಾಣದಲ್ಲಿ 500 ಮತ್ತು 1000 ಮೌಲ್ಯದ ನೋಟುಗಳು ಪತ್ತೆಯಾಗುತ್ತಿವೆ.
Comments are closed.