ದಾವಣಗೆರೆ (ನ.07): ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧನ ಮೃತದೇಹವನ್ನು ವೀಕ್ಷಿಸಲು ತೆರಳಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವ ದೆಹಲಿ ಪೊಲೀಸರ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ದಾವಣಗೆರೆಯಲ್ಲಿ ಪ್ರತಿಭಟಿಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ್ ಮಾತನಾಡಿ, ರಾಹುಲ್ ಗಾಂಧಿ ದೇಶಕ್ಕಾಗಿ ತ್ಯಾಗ, ಬಲಿದಾನವನ್ನು ಮಾಡಿದ ಕುಟುಂಬದ ಕುಡಿಯಾಗಿದ್ದಾರೆ. ಅವರನ್ನು ಬಂಧಿಸುವ ಮೂಲಕ ಕೇಂದ್ರ ಸರ್ಕಾರ ನಿರಂಕುಶವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಪಾಲಿಕೆ ಮೇಯರ್ ರೇಖಾ ನಾಗರಾಜ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಬಂಧಿಸುವ ಮೂಲಕ ಚಾರಿತ್ರ್ಯ ವಧೆ ಮಾಡಲು ಯತ್ನಿಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಪಿ.ರಾಜಕುಮಾರ್ ಮಾತನಾಡಿ, ಬಿಜೆಪಿ ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿಯವರು ಯೋಧ ಸತ್ತರೆ ಮನೆ ಬಾಗಿಲಿಗೆ ತೆರಳಿ ಬಿಜೆಪಿ ಬಾವುಟವಿಟ್ಟು ಈತ ನಮ್ಮ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿದ್ದಾರೆ. ಯಾರೇ ಸಾವನ್ನಪ್ಪಿದರು ಇದಕ್ಕೆ ಕಾಂಗ್ರೆಸ್ನವರೇ ಕೊಲೆ ಮಾಡಿದ್ದಾರೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದರು.
ಪಾಲಿಕೆ ಉಪಮೇಯರ್ ರಾಜಶೇಖರ ಗೌಡ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಾಜಿ ಮೇಯರ್ ಎಚ್.ಬಿ. ಗೋಣೆಪ್ಪ, ಕಾಂಗ್ರೆಸ್ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಎಂ.ಹಾಲೇಶ್, ಪಿ.ಎಸ್. ಚಂದ್ರಶೇಖರ್, ಮಂಜಮ್ಮ, ದಾಕ್ಷಾಯಣಮ್ಮ, ಅಬ್ದುಲ್ ಲತೀಫ್, ಶೇಖ್ ಅಹ್ಮದ್, ಲಲಿತ ರಮೇಶ್, ಸುರೇಂದ್ರ ಮೊಯ್ಲಿ, ಎ.ನಾಗರಾಜ್, ಕೆ.ಜಿ. ಶಿವಕುಮಾರ್, ಮುಜಾಯಿದ್ ಭಾಷಾ, ವೆಂಕಟೇಶ್ ನಾಯ್ಕ್, ಬಸಪ್ಪ, ಪ್ರವೀಣ್ ಹುಲ್ಲುಮನಿ, ಎಲ್.ಎಂ. ಹನುಮಂತಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಕರ್ನಾಟಕ
Comments are closed.