ತುಮಕೂರು: ಪಾವಗಡ ಪಟ್ಟಣದ ನಡೆದ ಅಂಬುಲೆನ್ಸ್ ಡ್ರೈವರ್ ಪತ್ನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಹಿಳೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯ ಮಗುವನ್ನು ಕೊಂದು ಅತ್ಯಾಚಾರ ನಾಟಕವಾಡುತ್ತಿದ್ದಾಳೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
ಪತ್ನಿ ಮಂಜುಳಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಎರಡು ವರ್ಷಗಳಿಂದ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಪತ್ನಿಯೇ ಮಗುವನ್ನು ಕೊಂದು ಅತ್ಯಾಚಾರವಾಗಿದೆ ಎಂದು ಸುಳ್ಳು ದೂರು ನೀಡಿರಬಹುದು ಎಂದು ಪತಿ ಆಂಜನೇಯ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಏನಿದು ಪ್ರಕರಣ?
ಪತಿ ಅಪಘಾತಕ್ಕೀಡಾಗಿದ್ದಾನೆಂದು ಯಾರೋ ಕಾಮುಕರು ಕರೆ ಮಾಡಿ ನನ್ನ ಮೇಲೆ ಅತ್ಯಾಚಾರ ಎಸಗಿ ಮಗುವನ್ನು ಕೊಂದು ಹಾಕಿದ್ದಾರೆ ಎಂದು ಶನಿವಾರ ಸಂಜೆ ಮಂಜುಳಾ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆದರೆ ತನಗೆ ಕರೆ ಮಾಡಿದ್ದವರು ಯಾರು, ಘಟನೆಯ ಹಿನ್ನೆಲೆಯ ಬಗ್ಗೆ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿಲ್ಲ. ತೀವ್ರ ಅಸ್ವಸ್ಥಗೊಂಡಿರುವ ಈಕೆಯನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೋಲೀಸರಿಗೆ ಕಾಮುಕರ ಬಗ್ಗೆ ಮಾಹಿತಿ ನೀಡುವಲ್ಲಿ ಮಹಿಳೆ ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅತ್ಯಾಚಾರಕ್ಕೆ ಒಳಗಾದ ಪತ್ನಿಯನ್ನು ನೋಡಲು ಪುಟ್ಟಪರ್ತಿಯಲ್ಲಿ ಅಂಬುಲೆನ್ಸ್ ಡ್ರೈವರ್ ಆಗಿರುವ ಅಂಜನೇಯಲು ಆಸ್ಪತ್ರೆಗೆ ಬಂದಿದ್ದಾರೆ.
2 ವರ್ಷಗಳ ಹಿಂದೆಯೂ ಈಕೆಯ ಮೊದಲ ಮಗು ಸಾವನ್ನಪ್ಪಿತ್ತು. ಈಗ 2ನೇ ಮಗು ಕೂಡಾ ಕೊಲೆಯಾಗಿದೆ ಎಂದು ಮಹಿಳೆ ಹೇಳುತ್ತಿದ್ದಾಳೆ. ಹೀಗಾಗಿ ಮಹಿಳೆ ಮೇಲೆಯೇ ಅನುಮಾನ ಆರಂಭವಾಗಿದೆ. ಆಕೆಗೆ ಅಕ್ರಮ ಸಂಬಂಧ ಇತ್ತು. ಈ ಕಾರಣಕ್ಕಾಗಿ ಮಗುವನ್ನು ಹತ್ಯೆ ಮಾಡಿರಬಹುದು ಎಂದು ಪತಿ ಆಂಜನೇಯಲು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳಿಂದ ಊಟ ಕೊಡದ ಕಾರಣ ಮಗು ಮೃತಪಟ್ಟಿರುವ ವಿಚಾರ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.