ಕರ್ನಾಟಕ

ನಾನು 50 ಕ್ಯಾಂಡಲ್ ಬಲ್ಬು; ಸಿದ್ದರಾಮಯ್ಯ 5 ಮೆ.ವ್ಯಾಟ್ ವಿದ್ಯುತ್ ಲೈನು

Pinterest LinkedIn Tumblr

Ibrahim CMಮೈಸೂರು(ಅ. 21): ಸಿಎಂ ಸಿದ್ದರಾಮಯ್ಯನವರ ಪರಮಾಪ್ತರೆಂದೇ ಪರಿಗಣಿಸಲಾಗಿದ್ದ ಸಿ.ಎಂ.ಇಬ್ರಾಹಿಂ ಇದೀಗ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಚ್ಚರಿ ಎಂದರೆ ದೇವೇಗೌಡರು ಹಾಗೂ ಅವರ ಕುಟುಂಬದ ವಿರುದ್ಧ ಕಟು ಟೀಕೆ ಮಾಡುತ್ತಾ ಬಂದಿದ್ದ ಇಬ್ರಾಹಿಂ ಇದೀಗ ದೇವೇಗೌಡರನ್ನು ತುಳಸೀದಳಕ್ಕೆ ಹೋಲಿಸಿ ಅಚ್ಚರಿ ಹುಟ್ಟಿಸಿದ್ದಾರೆ.
ಯೋಜನಾ ಮಂಡಳಿ ಉಪಾಧ್ಯಕ್ಷ ಸಿಎಂ ಇಬ್ರಾಹಿಂ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರ ವಿಚಾರದಲ್ಲಿ ತಮಗಿರುವ ನೋವನ್ನು ಹೊರಹಾಕಿದ್ದಾರೆ. “ನಾನು ಬರೀ 50 ಕ್ಯಾಂಡಲ್ ಬಲ್ಬು… ಅವರಾದರೋ ಐದು ಮೆಗಾವ್ಯಾಟ್ ವಿದ್ಯುತ್ ಲೈನ್ ಇದ್ದಂತೆ…” ಎಂದು ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ.
“ಸಿದ್ದರಾಮಯ್ಯನವರು ನನ್ನ ಆತ್ಮೀಯ ಸ್ನೇಹಿತರು.. ಅವರು ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂಬ ಆಸೆ ಇಟ್ಟುಕೊಂಡಿದ್ದವರು… ಆದರೆ ಹಾಗೆ ಆಗಲಿಲ್ಲವಲ್ಲ ಅನ್ನೋ ನೋವಿದೆ…” ಎಂದೂ ಮಾಜಿ ಜೆಡಿಎಸ್ ಮುಖಂಡರಾದ ಅವರು ವಿಷಾದಿಸಿದ್ದಾರೆ.
ದೇವೇಗೌಡರ ಬಗ್ಗೆ ಮಾತನಾಡಿದ ಇಬ್ರಾಹಿಂ, ಅವರನ್ನು ತುಳಸೀದಳಕ್ಕೆ ಹೋಲಿಸಿದರು. “ದೇವೇಗೌಡರೊಂದಿಗಿನ ಬಾಂಧವ್ಯ ಯಾವತ್ತೂ ಇರುತ್ತೆ. ಕರ್ನಾಟಕಕ್ಕೆ ದೇವೇಗೌಡರು ತುಳಸೀ ದಳವಿದ್ದಂತೆ. ತುಳಸೀದಳದ ಮಹತ್ವ ಎಲ್ಲರಿಗೂ ಗೊತ್ತಿದೆ ಎಂದಂದುಕೊಂಡಿದ್ದೇನೆ” ಎಂದು ಇಬ್ರಾಹಿಂ ಪ್ರಶಂಸಿಸಿದ್ದಾರೆ.
ಸಿದ್ದು-ಇಬ್ರಾಹಿಂ ಸಂಬಂಧ ಹಳಸಿತಾ?
ಜನತಾ ಪರಿವಾರದಿಂದಲೂ ಸಿದ್ದರಾಮಯ್ಯನವರ ಆಪ್ತರಾಗಿದ್ದವರು ಸಿ.ಎಂ.ಇಬ್ರಾಹಿಂ. ಜನತಾ ಬಿಟ್ಟು ಕಾಂಗ್ರೆಸ್’ನ ಕೈ ಹಿಡಿಯುವಾಗಲೂ ಸಿದ್ದರಾಮಯ್ಯನವರನ್ನು ಹಿಂಬಾಲಿಸಿದ್ದರು. ಸಿದ್ದರಾಮಯ್ಯ ಸಂಕಷ್ಟದ ಸ್ಥಿತಿಯಲ್ಲಿದ್ದಾಗಲೂ ಅವರ ಜೊತೆಗೆ ನಿಂತು ತಮ್ಮ ಗೆಳೆತನವನ್ನು ತೋರಿಸಿದ್ದವರು. ಆದರೆ, ಕಳೆದ ಒಂದು ವರ್ಷದಿಂದ ಇಬ್ರಾಹಿಂ ಬದಲಾದಂತಿದ್ದಾರೆ. ಕೆಲ ಬಾರಿ ಬಹಿರಂಗವಾಗಿಯಲ್ಲದಿದ್ದರೂ ಪರೋಕ್ಷವಾಗಿ ತಮ್ಮ ಅಸಮಾಧಾನ ತೋರ್ಪಡಿಸುತ್ತಾ ಬಂದಿದ್ದರು. ಇದೀಗ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿರುವುದು ಕುತೂಹಲಕರವಾಗಿದೆ. ಇದಕ್ಕಿಂತ ಕುತೂಹಲವೆಂದರೆ ದೇವೇಗೌಡರ ಪರವಾಗಿ ಅವರು ಮಾತನಾಡುತ್ತಿರುವುದು.

Comments are closed.