ಶಿವಮೊಗ್ಗ: ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯ ಸ್ನೇಹ ಬೆಳೆಸಿದ ದುರುಳರು ಆಕೆಯ ಅಸಹಾಯಕತೆಯನ್ನೇ ಬಂಡವಾಳವಾಗಿಸಿಕೊಂಡು ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ. ಇದಕ್ಕೆ ಕಾರಣರಾದ ನಾಲ್ವರನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಿಪ್ಪನ್ಪೇಟೆ ಮೂಲದ ಸಿದ್ಧಾರ್ಥ, ವಿನಯ್, ನಾಗರಾಜ ಮತ್ತು ಕಿರಣ್ ಬಂಧಿತರು. ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಸಿದ್ಧಾರ್ಥನಿಗೆ ಎರಡು ವರ್ಷಗಳ ಹಿಂದೆ ಫೇಸ್ಬುಕ್ನಲ್ಲಿ ಶಿವಮೊಗ್ಗದ ಯುವತಿಯ ಪರಿಚಯವಾಗಿತ್ತು. ಇಬ್ಬರೂ ಫೇಸ್ಬುಕ್ನಲ್ಲಿ ಚಾಟ್ ಮಾಡಲಾರಂಭಿಸಿದ್ದಾರೆ. ಬಳಿಕ ಮೊಬೈಲ್ನಲ್ಲೂ ಮಾತನಾಡಲಾರಂಭಿಸಿದ್ದಾರೆ.
ಮಾತಿನಿಂದ ಬೆಳೆದ ಸಲುಗೆ ದೈಹಿಕ ಸಂಬಂಧಕ್ಕೂ ತಿರುಗಿದೆ. ಯುವತಿಯ ನಗ್ನಚಿತ್ರಗಳನ್ನು ಸಿದ್ಧಾರ್ಥ ಸೆರೆಹಿಡಿದಿದ್ದಾನೆ. ಹೇಗೋ ಈ ಫೋಟೋಗಳು ಸಿದ್ಧಾರ್ಥನ ಸಂಬಂಧಿ ವಿನಯ್ ಮೊಬೈಲ್ ಸೇರಿವೆ. ವಿನಯ್ ಯುವತಿಗೆ ಕರೆಮಾಡಿ ಹೆದರಿಸಿದ್ದಾನೆ. ಇದರಿಂದ ಹೆದರಿದ ಯುವತಿ ವಿನಯ್ ಜತೆಗೂ ಸಂಬಂಧ ಬೆಳೆಸಿದ್ದಾಳೆ. ಈ ವೇಳೆಗಾಗಲೇ ಯುವತಿ ಸಿದ್ಧಾರ್ಥ್ ಜತೆಗೆ ಜಗಳವಾಡಿಕೊಂಡಿದ್ದಳು.
ಈ ವಿಷಯವನ್ನು ವಿನಯ್ಗೆ ತಿಳಿಸಿ, ಸಿದ್ಧಾರ್ಥ್ ಬೇರೆ ಯಾರಿಗಾದರೂ ಫೋಟೋಗಳನ್ನು ನೀಡಿದರೆ ಕಷ್ಟ ಎಂದು ಹೇಳಿದ್ದಾಳೆ. ಆಗ ವಿನಯ್, ತನ್ನ ಗೆಳೆಯನೊಬ್ಬನಿಗೆ ಮಾಟ-ಮಂತ್ರ ಗೊತ್ತು. ಆತ ಮಾಟ-ಮಂತ್ರದಿಂದಲೇ ಸಿದ್ಧಾರ್ಥನ ಮೊಬೈಲ್ನಲ್ಲಿರುವ ಫೋಟೋ ಅಳಿಸಿಹಾಕುತ್ತಾನೆಂದು ಹೇಳಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ನಾಗರಾಜ್ನನ್ನು ಪರಿಚಯಸಿದ್ದಾನೆ.
ಯುವತಿಯ ಅಸಹಾಯಕತೆ ತಿಳಿದ ನಾಗರಾಜ್ನೂ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಇದರಿಂದ ಯುವತಿ ಗರ್ಭಿಣಿಯಾಗಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಯುವತಿ ಮನೆಯವರು ಆಕೆಯನ್ನು ನಾಗರಾಜ್ನೊಂದಿಗೇ ಹೋಗುವಂತೆ ಹೇಳಿ ಮನೆಯಿಂದ ಹೊರಹಾಕಿದ್ದಾರೆ.
ಈ ವೇಳೆ ಇವರ ಇನ್ನೊಬ್ಬ ಸ್ನೇಹಿತ ಕಿರಣ್ ಎಂಬಾತ ನಾಗರಾಜ್ ಹಾಗೂ ಯುವತಿಯ ಮದುವೆ ಮಾಡಿಸಲು ಮುಂದಾದಾಗ, ನಾಗರಾಜ್ಗೆ ಈಗಾಗಲೇ ಮದುವೆಯಾಗಿ ಮಗುವಿರುವುದು ಗೊತ್ತಾಗಿದ್ದು, ಕಂಗೆಟ್ಟ ಯುವತಿ ಹಾಗೂ ಆಕೆಯ ಕುಟುಂಬದವರು ನಾಲ್ವರು ಯುವಕರ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
Comments are closed.