ಮಂಗಳೂರು ಜೂ.11 : ಕರಾಳ ಭವಿಷ್ಯಕ್ಕೆ ರಾಜ್ಯದ ಕರಾವಳಿ ಸಮೀಪಿಸುತ್ತಿದೆಯಾ? ಸಾಗರ ಉಕ್ಕಿ ಕರುನಾಡು ಬರುಡಾಗೋ ದಿನ ಹತ್ತಿರ ಬರ್ತಿದೆಯಾ? ಮತ್ಸ್ಯಕ್ಷಾಮ, ಜಲಕ್ಷಾಮ ಕಾಡಲಿದೆಯಾ? ಇಂತಹ ಆತಂಕ ಇವಾಗ ನಮ್ಮ ಕರಾವಳಿಗರನ್ನ ಕಾಡುತ್ತಿದೆ.
ಬಳ್ಳಾರಿಯ ಗಣಿ ಮಾಫಿಯಾವನ್ನೇ ಮೀರಿಸುವಂತಿರುವಂಥಾ ಅಕ್ರಮ ಮರಳುಗಾರಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ. CRZ ಅಂದ್ರೆ ಕರಾವಳಿ ನಿಯಂತ್ರಿತ ವಲಯದಲ್ಲೇ ಲಕ್ಷಾಂತರ ಟನ್ ಮರಳಿನ ಪ್ರತಿ ನಿತ್ಯ ಲೂಟಿ ನಡೆಯುತ್ತಿದೆ.
ಕೇರಳದಲ್ಲಿ ಮರಳು ನಿಷೇಧಿಸಿರುವ ಕಾರಣ ಇಲ್ಲಿನ ಮರಳಿಗೆ ಚಿನ್ನದ ಬೆಲೆ. ಹೀಗಾಗಿ ರಾಜ್ಯದಿಂದ ನಿತ್ಯ 300 ಲೋಡ್ ಮರಳು ಅಕ್ರಮವಾಗಿ ಕೇರಳಕ್ಕೆ ಸಾಗಿಸಲಾಗ್ತಿದೆ. ಇದಕ್ಕೆ ಆರ್ಟಿಒ ಮತ್ತು ಪೊಲೀಸರ ಸಹಕಾರ ಇಲ್ಲದೇನಿಲ್ಲ. ಬೆಂಗಳೂರಲ್ಲಿ ಪ್ರತಿ ಲೋಡ್ ಮರಳಿಗೆ 50 ರಿಂದ 70 ಸಾವಿರ ಬೆಲೆಯಿದ್ದರೆ, ಇತರೆ ಜಿಲ್ಲೆಗಳಲ್ಲಿ 10-15 ಸಾವಿರ.
ಬೆಳಗಿನ ಜಾವ 4 ಗಂಟೆಗೇ ನೇತ್ರಾವತಿ ನದೀ ತಟದಿಂದ ನೂರಾರು ಲಾರಿಗಳು ಕದ್ದು ಮುಚ್ಚಿ ಮರಳು ಸಾಗಿಸುತ್ತಿವೆ. ಅಕ್ರಮ ಸಾಗಾಟಕ್ಕೆ 18 ಕಳ್ಳ ದಾರಿಗಳಿದ್ದು ಈ ಪೈಕಿ 2 ಮಾರ್ಗಗಳಲ್ಲಿ ಮಾತ್ರ ಚೆಕ್ ಪೋಸ್ಟ್ಗಳಿವೆ.
ಅಕ್ರಮ ಮರಳುಗಾರಿಕೆಯಿಂದ ದ.ಕ ಜಿಲ್ಲೆಯೊಂದರಲ್ಲೇ ವರ್ಷಕ್ಕೆ 300 ಕೋಟಿ ರೂಪಾಯಿ ಬೊಕ್ಕಸಕ್ಕೆ ಖೋತಾ ಆಗುತ್ತಿದೆ. ಜತೆಗೆ ನಕಲಿ ಪರ್ಮಿಟ್ ದಂಧೆಯೂ ಎಗ್ಗಿಲ್ಲದೆ ನಡೆಯುತ್ತಿದೆ. ಇನ್ನು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಮರಳು ನೀತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. 400ಕ್ಕೂ ಜಾಸ್ತಿ ಮಂದಿಗೆ ಪರ್ಮಿಟ್ ನೀಡಿದ್ದಾರೆ ಅನ್ನೋದು ಆರೋಪ. CRZ ನಿಯಮ ಉಲ್ಲಂಫಿಸಿ ಗಣಿಗಾರಿಕೆ ನಡೆಸುತ್ತಿರೋದ್ರಿಂದ ರಸ್ತೆ, ಸೇತುವೆಗಳು ಹಾಳಾಗ್ತಿವೆ. ಉಪ್ಪು ನೀರು, ನದಿಯ ಸಿಹಿ ನೀರಿನ ಭಾಗವನ್ನ ಆಕ್ರಮಿಸಿಕೊಳ್ಳುತ್ತಿದೆ. ಕಡಲ್ಕೊರೆತ ಕೂಡ ಹೆಚ್ಚುತ್ತಿದೆ.
ಈಗಾಗ್ಲೇ ಜಲ, ಮತ್ಸ್ಯ ಕ್ಷಾಮ ತಲೆದೋರಿದೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
Comments are closed.