ಕರ್ನಾಟಕ

ಯುವಕನ ಕೊಲೆ ಪ್ರಕರಣ ಬಯಲು: ಗೆಳೆಯನ ಕೊಲೆಗೆ ಕಾರಣವಾಯಿತು ಮೊಬೈಲ್

Pinterest LinkedIn Tumblr

porn-mobile

ಕಲಬುರಗಿ,ಜೂ.6-ಇದೇ ತಿಂಗಳ 4 ರಂದು ನಂದೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಡೆದ ಯುವಕನ ಕೊಲೆ ಪ್ರಕರಣ ಬೇಧಿಸುವಲ್ಲಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊಬೈಲ್ ಗಾಗಿ ಗೆಳೆಯರಿಬ್ಬರ ನಡುವೆ ನಡೆದ ಜಗಳವೇ ಕೊಲೆಗೆ ಕಾರಣ ಎಂಬುವುದು ಬೆಳಕಿಗೆ ಬಂದಿದೆ.

4.6.2016 ರಂದು ಬೆಳಗಿನಜಾವ ನಂದೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮಲ್ಲಿಕಾರ್ಜುನ ಶಿವಶರಣಪ್ಪ ಮುದ್ದಡಗಿ (36) ಎಂಬಾತನನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಎಸ್ಐ ರಾಘವೇಂದ್ರ ಮತ್ತು ಸಿಬ್ಬಂದಿ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ಮಲ್ಲಿಕಾರ್ಜುನ ಶಿವಶರಣಪ್ಪ ಮುದ್ದಡಗಿ ಮತ್ತು ಆತನ ಆತ್ಮೀಯ ಗೆಳೆಯ ಚನ್ನಬಸಪ್ಪ ಶಿವಶರಣಪ್ಪ ಗುತ್ತಿ (32) ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮಲ್ಲಿಕಾರ್ಜುನ ಮುದ್ದಡಗಿ ಚನ್ನಬಸಪ್ಪ ಗುತ್ತಿ ಬಳಿ ಮೊಬೈಲ್ ತೆಗೆದುಕೊಂಡಿದ್ದ. ಮೊಬೈಲ್ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ಸಂಬಂಧ ಚನ್ನಬಸಪ್ಪ ಗೆಳೆಯ ಮಲ್ಲಿಕಾರ್ಜುನ ಮುದ್ದಡಗಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಚನ್ನಬಸಪ್ಪ ಗುತ್ತಿಯನ್ನು ವಶಕ್ಕೆ ತೆಗೆದುಕೊಂಡ ವಿವಿ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.