ದಾವಣಗೆರೆ: ಸೊಸೆಗೆ ಚಾಕುವಿನಿಂದ ಇರಿಯುವ ಪ್ರಯತ್ನ ವಿಫಲವಾಗಿದ್ದಕ್ಕೆ ನೊಂದು ಮಾವನೇ ತನ್ನ ಕೈಯಾರೇ ಹೊಟ್ಟೆಗೆ ಇರಿದು ಈಗ ಚಾಕುವಿನ ಸಮೇತ ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹೌದು. ದಾವಣಗೆರೆ ನಗರದ ಶಾಮನೂರಿನಲ್ಲಿ ಇಂತಹದೊಂದು ಘಟನೆ ನಡೆದಿದೆ. ಶುಕ್ರವಾರ ಶಾಮನೂರಿನಲ್ಲಿ ಇರುವ ಮಗನ ಮನೆಗೆ ಬಂದಿದ್ದ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಕೊಂಚಿಕೆರೆಯ ನಿವಾಸಿ ಸಣ್ಣಸಿದ್ದಪ್ಪ ಚಾಕುವಿನಿಂದ ಇರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸಿದ್ದಪ್ಪನ ಮಗ ಗಾದಿಲಿಂಗಪ್ಪ ಹಾಗೂ ದೀಪ ಶಾಮನೂರಿನಲ್ಲಿ ವಾಸವಾಗಿದ್ದಾರೆ. ಮನೆಗೆ ಬಂದ ಸಣ್ಣಸಿದ್ದಪ್ಪ ರಾತ್ರಿ ಮನೆಯಲ್ಲಿ ಜಗಳವಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ಮಗ ಮತ್ತು ಸೊಸೆಗೆ ಬೈದ್ದಿದ್ದಾರೆ. ಈ ವೇಳೆ ಮಗ ತಂದೆಗೆ ಈ ರೀತಿ ಮಾಡಬಾರದು ಎಂದು ಹೇಳಿ ಕೆಲಸಕ್ಕೆ ಹೋಗಿದ್ದಾರೆ. ಮಗ ಕೆಲಸಕ್ಕೆ ಹೋಗುತ್ತಿದ್ದಂತೆಯೆ ಸಣ್ಣ ಸಿದ್ದಪ್ಪ ಮನೆಯಲ್ಲಿ ಇದ್ದ ಸೊಸೆ ದೀಪಾಗೆ ಚಾಕುವಿನಿಂದ ಇರಿಯಲು ಹೋಗಿದ್ದಾರೆ. ಮಾವ ಇರಿಯಲು ಬಂದಾಗ ಸೊಸೆ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.
ಸೊಸೆ ಮನೆಯಿಂದ ಹೊರಗೆ ಬರುತ್ತಿದ್ದಂತೆಯೆ ಒಳಗಡೆ ಸಿದ್ದಪ್ಪ ಚಾಕುವಿನಿಂದ ಕತ್ತು ಕೊಯ್ದು ಕೊಂಡು ನಂತರ ಹೊಟ್ಟೆಗೆ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಚಾಕು ಹೊಟ್ಟೆಯಲ್ಲೆ ಉಳಿದು ಕೊಂಡಿದೆ. ನಂತರ ಸಣ್ಣಸಿದ್ದಪ್ಪ ಅವರನ್ನು ಸೊಸೆ ಹಾಗೂ ಅಕ್ಕ ಪಕ್ಕದವರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಹಿಂದೆ ಸಣ್ಣಸಿದ್ದಪ್ಪ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.
Comments are closed.