ಬೆಂಗಳೂರು, ಮೇ ೨೫- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಕೇಂದ್ರ ಸಚಿವ ವೆಂಕಯ್ಯನಾಯ್ಡುರವರನ್ನು ಮತ್ತೆ ಕಣಕ್ಕಿಳಿಸುವುದನ್ನು ಸಮರ್ಥಿಸಿಕೊಂಡಿರುವ ಶಾಸಕ ಹಾಗೂ ಬಿಜೆಪಿಯ ವಕ್ತಾರ ಸಿ.ಟಿ. ರವಿ, ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರು ಬಹಳ ಸಾಮರ್ಥ್ಯ ಇರುವ ವ್ಯಕ್ತಿ. ಪ್ರಧಾನಿ ನರೇಂದ್ರಮೋದಿಯವರ ಜತೆ ನೇರವಾಗಿ ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ಕೇಂದ್ರ ಸಚಿವ ವೆಂಕಯ್ಯನಾಯ್ಡುರವರನ್ನು ರಾಜ್ಯದಿಂದ ರಾಜ್ಯಸಭೆಗೆ ಕಳುಹಿಸುವುದರಿಂದ ರಾಜ್ಯಕ್ಕೆ ಲಾಭವಾಗುತ್ತದೆ. ಅವರನ್ನು ಕೈಬಿಟ್ಟರೆ ರಾಜ್ಯಕ್ಕೆ ನಷ್ಟ ಎಂದು ಸಿ.ಟಿ. ರವಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಕೇಂದ್ರ ಸಚಿವ ವೆಂಕಯ್ಯನಾಯ್ಡು ರಾಜ್ಯದವರಲ್ಲ ಎಂದು ಭಾವನಾತ್ಮಕವಾಗಿ ಯೋಚಿಸುವವರು ವೆಂಕಯ್ಯನಾಯ್ಡುರವರ ಸಾಮರ್ಥ್ಯವನ್ನು ಗಮನಿಸಬೇಕು. ನಮಗೆ ಬರೀ ಕೈ ಎತ್ತುವವರು ಬೇಕಾ ಅಥವಾ ನಿಜವಾಗಿ ಕೆಲಸ ಮಾಡುವವರು ಬೇಕಾ ಎಂಬುದನ್ನು ಯೋಚಿಸಬೇಕು ಎಂದು ಸಿ.ಟಿ. ರವಿ ಹೇಳಿದರು.
ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವೆಂಕಯ್ಯನಾಯ್ಡುರವರು ರಾಜ್ಯದ ಪರ ಕೇಂದ್ರ ಮಟ್ಟದಲ್ಲಿ ನಿಂತು ಹಲವು ಯೋಜನೆಗಳು ಅನುಷ್ಠಾನಗೊಳ್ಳಲು ಕಾರಣರಾಗಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕ
Comments are closed.