ಬೆಂಗಳೂರು, ಮೇ ೨೨- ಹುಬ್ಬಳ್ಳಿ ನಗರದ ಬಟ್ಟೆ ಅಂಗಡಿ ಕಳ್ಳತನ ಮಾಡಿದ ಖದೀಮರು ಬೆಂಗಳೂರಿನಲ್ಲಿ ಕಾರು ಕದ್ದು ಕುಮಾರಸ್ವಾಮಿ ಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತರನ್ನು ಬೆಂಗಳೂರಿನ ಅಜರ್, ನವಾಜ್, ಮುಬಾರಕ್, ಸಲ್ಮಾನ್ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ.
ಕಳೆದ ಭಾನುವಾರ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ವೆನೇಸನ್ಸ್ ಬಟ್ಟೆ ಅಂಗಡಿಯ ಗೋಡೆಯಲ್ಲಿ ಕೂಡಿಸಿದ್ದ ಎಕ್ಸಿಟ್ ಫ್ಯಾನ್ ಕತ್ತರಿಸಿ ಒಳನುಗ್ಗಿದ ಕಳ್ಳರು ಅಂಗಡಿಯ ಕೌಂಟರ್ನಲ್ಲಿದ್ದ ೨.೧೦ ಲಕ್ಷ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತಂತೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನಲ್ಲಿ ಕಾರು ಕದ್ದು ಸಿಕ್ಕಿಬಿದ್ದರು: ಆರೋಪಿಗಳು ನೇರವಾಗಿ ಬೆಂಗಳೂರಿಗೆ ಬಂದು ಕಾರು ಕಳ್ಳತನ ಮಾಡಿದ್ದರು. ಮೇ. ೧೬ರಂದು ಅನುಮಾನಾಸ್ಪವಾಗಿ ಓಡಾಡುತ್ತಿದ್ದ ಕಾರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳರು ಬಾಯ್ಬಿಟ್ಟಿದ್ದಾರೆ. ಹುಬ್ಬಳ್ಳಿ ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದು ತಾವೇ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಳಿಕ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದಾಗಿ ಶಹರ ಠಾಣೆ ಪೊಲೀಸರು ತಿಳಿಸಿದ್ದಾರೆ.
Comments are closed.