ಕರ್ನಾಟಕ

ಬಿಎಂಟಿಸಿ ಬಸ್ ಡಿಕ್ಕಿ ಯುವತಿ ದುರ್ಮರಣ

Pinterest LinkedIn Tumblr

22BMTCಬೆಂಗಳೂರು, ಮೇ ೨೨- ಬಿಎಂಟಿಸಿ ಬಸ್ಸೊಂದು ಬೈಕ್‌ಗೆ ಹಿಂದಿನಿಂದ ಡಿಕ್ಕಿಯೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ರಾಜರಾಜೇಶ್ವರಿನಗರ, ನಾಯಂಡಹಳ್ಳಿ ನಿವಾಸಿ ಸವಿತಾ (೧೭) ಮೃತಪಟ್ಟವರು. ಬೈಕ್ ಸವಾರ ಆಕೆಯ ಅಣ್ಣ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಬೆಳಗ್ಗೆ ಅಣ್ಣನೊಂದಿಗೆ ಟಿ.ನರಸೀಪುರಕ್ಕೆ ಬೈಕ್‌ನಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಪಂತರಪಾಳ್ಯ ಬಳಿ ಈ ದುರ್ಘಟನೆ ನಡೆದಿದೆ. ಚಂದ್ರಾಲೇಔಟ್ ಡಿಪೋಗೆ ಸೇರಿದ ಬಸ್ ಮೆಜೆಸ್ಟಿಕ್‌ನಿಂದ ಕೆಂಗೇರಿಗೆ ಹೋಗುತ್ತಿದ್ದಾಗ ಪಂತರಪಾಳ್ಯ ಬಳಿ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನ ಹಿಂದೆ ಕುಳಿತಿದ್ದ ಸವಿತಾ ರಸ್ತೆಗೆ ಬಿದ್ದಿದ್ದು ಬಸ್ ಆಕೆಯ ಮೇಲೆ ಹರಿದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲತಃ ಮೈಸೂರಿನವರಾದ ಸವಿತಾ ಅವರು ನಗರದ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಕಾರ್ಖಾನೆಗೆ ರಜೆ ಇದ್ದುದರಿಂದ ಸಂಬಂಧಿಕರ ಮನೆಯ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸವಿತಾ ಅವರು ಹೆಲ್ಮೆಟ್ ಹಾಕಿರಲಿಲ್ಲ. ಒಂದು ವೇಳೆ ಹೆಲ್ಮೆಟ್ ಹಾಕಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಟರಾಯನಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಸ್ ಚಾಲಕನನ್ನು ಬಂಧಿಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಅಪಘಾತದಿಂದಾಗಿ ಕೆಲ ಕಾಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

Comments are closed.