ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದು ಹಲವು ಅಹಿತಕರ ಘಟನೆಗಳಿಂದ ಸಾಬೀತಾಗಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ನಿನ್ನೆ ಮಾಡಿರುವ ಘಟನೆ ವರದಿಯಾಗಿದೆ.
ಮನೆಯೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳು ಒಂಟಿ ಮಹಿಳೆಯ ಕೈ ಕಾಲು ಕಟ್ಟಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ದೆಹಲಿ ಮೂಲದ ಕಿರಣ್ ಸಿಂಗ್(45) ಮೃತಪಟ್ಟ ದುರ್ದೈವಿ. ನಗರದ ಕೊತ್ತನೂರು ಚಿಕ್ಕಕುಬ್ಬಿಯ ತಪೋನಗರದಲ್ಲಿ ವಾಸವಾಗಿದ್ದ ಕಿರಣ್ ಸಿಂಗ್ ಮನೆಯಲ್ಲಿ ಈ ಘಟನೆ ನಡೆದಿದೆ.
ಈಕೆಯ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಈಕೆಯ ಕೈ ಕಾಲು ಕಟ್ಟಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿತ್ಯ ಮನೆಗೆಲಸಕ್ಕೆ ಬರುತ್ತಿದ್ದ ಮಹಿಳೆ ಬುಧವಾರ ಬೆಳಗ್ಗೆಯೂ ಮನೆಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮನೆಕೆಲಸದಾಕೆ ಕಿರುಚಾಡಿದ್ದು ಮನೆಗೆ ಬಂದ ಸ್ಥಳೀಯರು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಥಳಿಯರ ಹೇಳಿಕೆ ಪ್ರಕಾರ, ನಿನ್ನೆ ಸಂಜೆ 7 ರವೇಳೆಗೆ ಮನೆಯಿಂದ ಹೊರಗಡೆ ಕಿರಣ್ ಕಾಣಿಸಿಕೊಂಡಿದ್ದಾರೆ. ತದ ನಂತರ ಕಾಣಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ, ಅವರ ಮನೆಯ ಪಕ್ಕದ ಕಾಲಿ ಜಾಗದಲ್ಲಿ ಕೆಲ ವ್ಯಕ್ತಿಗಳು ಬಂದು ಮಾವಿನ ಸಸಿ ನೆಟ್ಟಿ ಹೋಗಿರುವುದಾಗಿ ತಿಳಿದು ಬಂದಿದೆ. ಮನೆಯಲ್ಲಿ ಒಂಟಿಯಾಗಿದ್ದದನ್ನು ಗಮನಿಸಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಕಿರಣ್ ಸಿಂಗ್ ಕಳೆದ ಐದು ವರ್ಷಗಳಿಂದ ನಗರದ ಸರ್ಕಾರೇತರ ಸಂಸ್ಥೆ ಮಾನಸ ಫೌಂಡೇಶನ್ ನಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ನಾಲ್ಕು ವರ್ಷ ಬಾಡಿಗೆ ಮನೆಯಲ್ಲಿ ನೆಲಸಿದ್ದ ಇವರು, ಚಿಕ್ಕ ಗುಬ್ಬಿಯಲ್ಲಿ ಮನೆಯೊಂದನ್ನು ಖರೀದಿಸಿ ಒಂಟಿಯಾಗಿದ್ದರು. ನಗರಕ್ಕೆ ಬರುವುದಕ್ಕೂ ಮುಂಚೆ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಈಕೆಯ ಪತಿ ದೆಹಲಿಯಲ್ಲಿ ವೈದ್ಯರಾಗಿದ್ದು, ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ನೀಡಿದ್ದರು.
Comments are closed.