ಬೆಂಗಳೂರು: ಕುಡಿಯುವ ನೀರು ಪ್ರಯೋಗಾಲಯ ಸ್ಥಾಪನೆ ಹಗರಣಕ್ಕೆ ಸಂಬಂಧಿಸಿದಂತೆ 9 ಮಂದಿ ಅಧಿಕಾರಿಗಳಿಗೆ ಬರೆ ಎಳೆದಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ರವರು ಏಳು ಮಂದಿಯನ್ನು ಸೇವೆಯಿಂದ ಅಮಾನತ್ತುಗೊಳಿಸಿ, ಇಬ್ಬರು ಮುಖ್ಯ ಇಂಜಿನಿಯರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ರಾಜ್ಯದ 140 ತಾಲ್ಲೂಕುಗಳಲ್ಲಿ ಕುಡಿಯುವ ನೀರು, ಪ್ರಯೋಗಾಲಯ ಸ್ಥಾಪನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬರುತ್ತಿದಂತೆ ಈ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದ ಸಚಿವರು ಈಗ ತಪ್ಪಿತಸ್ಥ ಅಧಿಕಾರಿಗಳಿಗೆ ಬರೆ ಎಳೆದಿದ್ದಾರೆ.
ಸಚಿವರ ಗಮನಕ್ಕೂ ತರದೆ ಪ್ರಯೋಗಾಲಯ ಸ್ಥಾಪನೆ ಸಂಬಂಧ ಪ್ರಕ್ರಿಯೆ ಕೈಗೊಂಡು ಅವ್ಯವಹಾರ ನಡೆಸಲಾಗಿತ್ತು.
ಅವ್ಯವಹಾರದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಸಹಾಯಕ ಇಂಜಿನಿಯರ್ಗಳಾದ ಶ್ರೀಕಾಂತ್, ವಿ. ರಾಜು, ಲೆಕ್ಕಾಧಿಕಾರಿ ನಾಗೇಶ್ವರ ರಾವ್, ದ್ವಿತೀಯ ದರ್ಜೆ ಲೆಕ್ಕ ಪರಿಶೋಧಕರಾದ ರಮೇಶ್, ಹನುಮಮೂರ್ತಿ, ನಟೇಶ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ಪ್ರಯೋಗಾಲಯ ಸ್ಥಾಪಿಸಲು ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ನೀಡಿದ ಮುಖ್ಯ ಇಂಜಿನಿಯರ್ಗಳಾದ ಜೆ.ಪಿ. ರೆಡ್ಡಿ ಮತ್ತು ಕುಲಕರ್ಣಿ ಅವರ ಮೇಲೆ ಶಿಸ್ತು ಕೈಗೊಳ್ಳಲು ಹೆಚ್ಚುವರಿ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 80 ಕುಡಿಯುವ ನೀರು ಪ್ರಯೋಗಾಲಯದ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸುವ ಬಗ್ಗೆ ಕಾನೂನು ಅಭಿಪ್ರಾಯ ಪಡೆಯಲು ಒಂದು ವಾರದೊಳಗೆ ವರದಿ ನೀಡುವಂತೆಯೂ ಸಚಿವ ಪಾಟೀಲ್ ಸೂಚನೆ ನೀಡಿದ್ದಾರೆ.
ಕುಡಿಯುವ ನೀರು ಪ್ರಯೋಗಾಲಯದ ಅವ್ಯವಹಾರವನ್ನು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಬಯಲಿಗೆಳೆದು ನೈತಿಕ ಹೊಣೆ ಹೊತ್ತು ಸಚಿವ ಎಚ್.ಕೆ. ಪಾಟೀಲ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.
Comments are closed.