ಮೈಸೂರು: ಈ ವರ್ಷ ಮೈಸೂರಿನಲ್ಲಿ ತಾಪಮಾನ ಹೆಚ್ಚಾಗಿದ್ದರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಮೇಯರ್ ಭೈರಪ್ಪ ತಿಳಿಸಿದರು.
ಅವರು ನಗರದ ಕೆ.ಆರ್.ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಪರಿಶೀಲನೆ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದರು. ಶಾಖ ಹೆಚ್ಚಾಗಿ ಪುಸ್ಥಳಿಯಲ್ಲಿ ಬಿರುಕು ಬಂದಿದೆ ಇದನ್ನು ಶಿಲ್ಪಿ ಅರುಣ್ ಯೋಗರಾಜ್ ರವರಿಂದ ಸರಿಪಡಿಸಲಾಗುವುದು. ಪುತ್ಥಳಿಗೆ ಆಗಿರುವ ಹಾನಿಗಳನ್ನು ಗಮನಿಸಿ ಯಾವ ರೀತಿಯಾಗಿ ಸರಿಪಡಿಸಬಹುದು ಎಂಬುದಾಗಿ ತಿಳಿಸಲ್ಲಿದ್ದಾರೆ. ಇನ್ನೂ ಮುಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಗೆ ಹೂವಿನ ಹಾರವನ್ನು ಪಾದದ ಬಳಿ ಹಾಕಲಾಗುತ್ತದೆ. ಏಕೆಂದರೆ ಹೂವಿನ ಭಾರದಿಂದ ಪುತ್ಥಳಿ ಹಾಳಾಗುವುದೆಂದು ಶಿಲ್ಪಿಗಳು ತಿಳಿಸಿದ್ದಾರೆ. ಹಾಗೂ ಜಯ ಚಾಮರಾಜೇಂದ್ರ ಪುತ್ಥಳಿಯನ್ನು ಇವರೇ ತಯಾರಿಸುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿಲ್ಪಿ ಅರುಣ್ ಯೋಗರಾಜ್ ಮಾತನಾಡಿ ನ್ಯಾಚೂರಲ್ ಆಗಿ ಕ್ರಾಕ್ ಬಿಟ್ಟಿದೆ. ಕಲ್ಲಿನಲ್ಲಿ ಸಣ್ಣ ರಂಧ್ರಗಳು ಕಾಣಿಸಿ ಕೊಂಡಾಗ ಈ ಸಮಸ್ಯೆಗಳು ಬರುತ್ತವೆ. ಇದನ್ನು ಸೆಲ್ಯೂಷನ್ ಅಳವಡಿಸಿ ಸರಿಪಡಿಸಲಾಗುವುದು. ಈ ಜಾಗದಲ್ಲಿ ಪಕ್ಷಿಗಳು ಹೆಚ್ಚಾಗಿದ್ದು ಪಿಕ್ಕೆಗಳನ್ನು ಹಾಕುತ್ತಿವೆ. ಇದರಲ್ಲಿ ಅಸೀಡ್ ಇರುತ್ತದೆ. ಪುತ್ಥಳಿಯ ಮೇಲೆ ಬೀಳುವುದರಿಂದ ಪುತ್ಥಳಿಯ ಬಣ್ಣ ಬದಲಾಗುತ್ತದೆ. ಇದನೆಲ್ಲ ಗಮನದಲ್ಲಿಟ್ಟು ಕೊಂಡು ೪೦೦ ವರ್ಷದ ವರೆಗೆ ಹಾಳಾಗದಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಯನ್ನು ಸರಿಪಡಿಸಬಹುದಾಗಿದೆ ಎಂದು ತಿಳಿಸಿದರು.
ಪರಿಶೀಲನಾ ವೇಳೆ ಉಪ ಮೇಯರ್ ವನಿತ ಪ್ರಸನ್ನ ಕುಮಾರ್, ಪಾಲಿಕೆ ಆಡಳಿತ ಪಕ್ಷದ ನಾಯಕ ಚೆಲುವೆಗೌಡ ಸೇರಿದಂತೆ ಇತರರು ಇದ್ದರು.