ತುಮಕೂರು: ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಕೆಯ ಮತ್ತೊಬ್ಬ ಆರೋಪಿ ಮಲ್ಲೇಶನನ್ನು ತುಮಕೂರು-ಹೆಬ್ಬೂರು ರಸ್ತೆಯ ತೋಟದ ಮನೆಯೊಂದರಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಇತ್ತೀಚೆಗಷ್ಟೇ ಬೆಳ್ಳಾವಿ ಸಮೀಪವಿರುವ ನಂದಿಹಳ್ಳಿಯ ತೋಟದ ಮನೆಯಲ್ಲಿದ್ದುಕೊಂಡು ಗುರುತು ಸಿಗದಂತೆ ಮೀಸೆ-ತಲೆ ಬೋಳಿಸಿಕೊಂಡು ತಿರುಗಾಡುತ್ತಿದ್ದ ಕಿರಣ್ ಅಲಿಯಾಸ್ ಕುಮಾರಸ್ವಾಮಿಯನ್ನು ಸಿಐಡಿ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಮಲ್ಲೇಶ್ನ ಬಗ್ಗೆ ಬಾಯ್ಬಿಟ್ಟಿದ್ದನು.
13 ಜನರ ವಿಶೇಷ ಪೊಲೀಸ್ ತಂಡ ನಿನ್ನೆ ಮಲ್ಲೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಒಟ್ಟಾರೆ ಸಿಐಡಿ ಪೊಲೀಸ್ ಬಲೆಗೆ ಒಬ್ಬೊಬ್ಬರಾಗಿ ಸಿಕ್ಕಿ ಬೀಳುತ್ತಿದ್ದು, ಉಪನ್ಯಾಸಕರು ಸೇರಿದಂತೆ ಕೆಲ ಪೊಲೀಸರೂ ಇದರಲ್ಲಿ ಭಾಗಿಯಾಗಿರುವ ಬಗ್ಗೆ ಕೇಳಿ ಬರುತ್ತಿರುವುದರಿಂದ ತನಿಖೆ ಚುರುಕುಗೊಳಿಸಿದ್ದಾರೆ.