ಬೆಂಗಳೂರು: ವಿಧಾನಪರಿಷತ್ನ 12 ಮಂದಿ ಸದಸ್ಯರು ನಿವೃತ್ತಿ ಅಂಚಿಗೆ ತಲುಪಿದ್ದಾರೆ. ಇದರಿಂದ ವಿಧಾನಪರಿಷತ್ನ ಬಲಾಬಲದಲ್ಲಿ ಏರುಪೇರಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್ನ ಸದಸ್ಯ ಬಲ ಏರಿಕೆಯಾಗಲಿದೆ. ವಿರೋಧ ಪಕ್ಷವಾದ ಬಿಜೆಪಿಯ ಸದಸ್ಯ ಬಲ ಇಳಿಕೆಯಾಗಲಿದ್ದು, ಸಭಾಧ್ಯಕ್ಷ ಸ್ಥಾನ ಬಿಜೆಪಿಯಿಂದ ಕೈತಪ್ಪುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಜೂನ್ನಲ್ಲಿ ನಡೆಯುವ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಸಭಾಧ್ಯಕ್ಷ ಸ್ಥಾನದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗುವ ಸಂಭವವಿದೆ.
ನಾಮಕರಣ ಸದಸ್ಯ ಲೆಹರ್ ಸಿಂಗ್ ಮೇ 28ಕ್ಕೆ ನಿವೃತ್ತಿಯಾಗಲಿದ್ದಾರೆ. ಬಿಜೆಪಿ ಸದಸ್ಯರಾದ ನಾರಾಯಣ್ ಸಾ ಬಾಂಡಗೆ, ಅಶ್ವತ್ಥ ನಾರಾಯಣ, ಸಿ.ಎಚ್.ವಿಜಯ್ಶಂಕರ್, ವಿ.ಸೋಮಣ್ಣ ಅವರು ಜೂನ್ 14 ರಂದು ನಿವೃತ್ತಿಯಾಗುವರು. ಕಾಂಗ್ರೆಸ್ ಸದಸ್ಯರಾದ ಡಾ.ವೀರಣ್ಣ ಮತ್ತಿಕಟ್ಟಿ, ಆರ್.ವಿ.ವೆಂಕಟೇಶ್, ಮಹಂತೇಶ ಶಿವಾನಂದ ಕೌಜಲಗಿ ಹಾಗೂ ಜೆಡಿಎಸ್ನ ಎಂ.ಶ್ರೀನಿವಾಸ್ ಕೂಡ ಜೂನ್ 14 ರಂದೇ ನಿವೃತ್ತಿಯಾಗಲಿದ್ದಾರೆ. ಬಿಜೆಪಿಯ ಗೋ ಮಧುಸೂದನ್, ಅರುಣ್ ಶಹಪುರ್, ಜೆಡಿಎಸ್ನ ಬಸವರಾಜ ಹೊರಟ್ಟಿ ಅವರು ಕೂಡ ಜುಲೈ 4 ರಂದು ನಿವೃತ್ತಿ ಹೊಂದಲಿದ್ದಾರೆ.
ನಿವೃತ್ತಿಯಿಂದ ತೆರವಾಗುವ 12 ಸ್ಥಾನಗಳಿಗೂ ಜೂನ್ನಲ್ಲಿ ಚುನಾವಣೆ ನಡೆಯುವ ಸಂಭವವಿದೆ. ಒಟ್ಟು 75 ಸದಸ್ಯ ಬಲದ ವಿಧಾನಪರಿಷತ್ನಲ್ಲಿ 3 ಸ್ಥಾನಗಳು ಖಾಲಿ ಉಳಿದಿವೆ. ಒಟ್ಟು 15 ಸ್ಥಾನಗಳು ಜುಲೈ ವೇಳೆಗೆ ಭರ್ತಿಯಾಗಬೇಕಾಗುತ್ತದೆ. ಮೂರು ಸ್ಥಾನಗಳು ನಾಮ ನಿರ್ದೇಶನ ಸದಸ್ಯ ಸ್ಥಾನಗಳಾದರೆ, 11 ಸದಸ್ಯ ಸ್ಥಾನಗಳು ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗಬೇಕಿದೆ. ಶಿಕ್ಷಕರ ಕ್ಷೇತ್ರದ 3 ಸದಸ್ಯ ಸ್ಥಾನಗಳು ಹಾಗೂ 1 ಪದವೀಧರ ಕ್ಷೇತ್ರದ ಸ್ಥಾನ ಒಳಗೊಂಡಿದೆ.
ಆಡಳಿತಾರೂಢ ಕಾಂಗ್ರೆಸ್ 29 ಸದಸ್ಯ ಬಲ ಹೊಂದಿದ್ದು, ಮೊದಲ ಸ್ಥಾನದಲ್ಲಿದೆ. ಬಿಜೆಪಿ 26 ಸದಸ್ಯ ಬಲ ಹೊಂದಿದ್ದು, 2ನೆ ಸ್ಥಾನದಲ್ಲಿದೆ. ಜೆಡಿಎಸ್ 11 ಸದಸ್ಯರನ್ನು ಹೊಂದಿದ್ದು, 5 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿಯ 7ಮಂದಿ ನಿವೃತ್ತಿ ಹೊಂದುವುದರಿಂದ ಅದರ ಬಲ ಜುಲೈ ವೇಳೆಗೆ 19ಕ್ಕೆ ಇಳಿಕೆಯಾಗಲಿದೆ. ಚುನಾವಣೆಗಳ ಫಲಿತಾಂಶಗಳ ನಂತರ ರಾಜಕೀಯ ಬಲಾಬಲದಲ್ಲಿ ಏರುಪೇರಾಗಲಿದೆ.