ಬೆಂಗಳೂರು: ಅಂಗ ಬದಲಾವಣೆಗಾಗಿ ಕಾದಿರುವ ರೋಗಿಗೆ ಪ್ರತಿಯೊಂದು ಕ್ಷಣವೂ ಅಮೂಲ್ಯ. ಈ ಹಿನ್ನೆಲೆಯಲ್ಲಿ ಪ್ರಮುಖ ವಿಜ್ಞಾನಿಗಳು ಒಂದುಗೂಡಿ ಹೃದಯ ಮತ್ತಿತರ ಪ್ರಮುಖ ಅಂಗಗಳ ವೇಗದ ಸಾಗಣೆಗೆ ಚಾಲಕ ರಹಿತ ವಿಮಾನಗಳ (ಡ್ರೋನ್)ನ್ನು ಬಳಸಲು ಯೋಜನೆಯೊಂದನ್ನು ರೂಪಿಸುತ್ತಿದ್ದಾರೆ.
`ಈ ಯೋಜನೆ ಮುಖ್ಯವಾಗಿ ಹೃದಯಗಳತ್ತ ಕೇಂದ್ರೀಕೃತವಾಗಿದೆ. ಏಕೆಂದರೆ ದೇಹದಿಂದ ಬೇರ್ಪಡುವ ಇತರ ಅಂಗಗಳನ್ನು ಹೆಚ್ಚು ಕಾಲ ಇಡಬಹುದಾಗಿದೆ’ ಎಂದು ಸ್ವದೇಶೀ ನಿರ್ಮಿತ ಹಗುರ ಯುದ್ಧ ವಿಮಾನ (ಎಲ್ಸಿಎ)ಗಳ ಪಿತಾಮಹ ಎಂದೇ ಖ್ಯಾತರಾದ ಕೋಟಾ ಹರಿನಾರಾಯಣ್ ಹೇಳಿದ್ದಾರೆ.
ಅರ್ಧ ಸಮಯ ಉಳಿಕೆ
ಈ ಯೋಜನೆಯಿಂದ ಆಸ್ಪತ್ರೆಗಳು ಶೇ. 50 ರಷ್ಟು ಸಮಯ ಉಳಿಸಬಹುದು ಹಾಗೂ ಹೆಚ್ಚು ಜೀವಗಳನ್ನು ಉಳಿಸಬಹುದು. ಮೂತ್ರ ಪಿಂಡವನ್ನು (ಕಿಡ್ನಿ) 24 ಗಂಟೆಗಳ ಕಾಲ, ಯಕೃತ್ತನ್ನು 12 ರಿಂದ 15 ಗಂಟೆಗಳು ಇಡಬಹುದು. ಆದರೆ, ಹೃದಯವನ್ನು 10 ಗಂಟೆಗೂ ಹೆಚ್ಚು ಕಾಲ ಇಡಲಾಗದು.
ಗ್ರೀನ್ ಕಾರಿಡಾರ್
ಪ್ರಸ್ತುತದಲ್ಲಿ ಅಂಗಾಂಗಗಳನ್ನು ರಸ್ತೆ ಮೂಲಕ ಆಂಬ್ಯೂಲೆನ್ಸ್ಗಳಲ್ಲಿ ಸಾಗಿಸಲಾಗುತ್ತಿದ್ದು, ಆಂಬ್ಯೂಲೆನ್ಸ್ಗಳಲ್ಲಿ ಸಾಗಿಸಲಾಗುತ್ತಿದ್ದು, ಅದಕ್ಕಾಗಿ ಇತರ ವಾಹನಗಳ ಸಂಚಾರ ತಡೆದು `ಗ್ರೀನ್ ಕಾರಿಡಾರ್’ ನಿರ್ಮಿಸಲಾಗುತ್ತಿದೆ.
ಕೋಟಾ ಹರಿನಾರಾಯಣ್ ಅವರೊಂದಿಗೆ ಈ ಯೋಜನೆಯಲ್ಲಿ ಹಿರಿಯ ವಿಜ್ಞಾನಿ ಹಾಗೂ ರಾಷ್ಟ್ರೀಯ ವಿನ್ಯಾಸ ಮತ್ತು ಸಂಶೋಧನಾ ವೇದಿಕೆಯ ಕೆ. ರಾಮಚಂದ್ರ ಅವರು ಜತೆಗೂಡಿದ್ದು, ಇತರ ಕೆಲವು ಅಮೆರಿಕದ ವಿಜ್ಞಾನಿಗಳು ಯೋಜನೆಗೆ ಅಂತಿಮ ರೂಪ ನೀಡುತ್ತಿದ್ದಾರೆ.
ವೈದ್ಯರು ಮತ್ತು ಇಂಜಿನಿಯರ್ಗಳ ನಿರ್ಧಾರಗಳು ಅಂತಿಮ ರೂಪ ಪಡೆದ ನಂತರ ಅದನ್ನು ಮಂಜೂರು ಮಾಡಿ, ಹಣಕಾಸು ನೆರವು ಪಡೆಯಲು ಸರ್ಕಾರವನ್ನು ಸಂಪರ್ಕಿಸುತ್ತೇವೆ, ವಾರಾಂತ್ಯದೊಳಗೆ ಯೋಜನೆ ಅಂತ್ಯಗೊಳ್ಳುವ ನಿರೀಕ್ಷೆ ಇದೆ.