ಕರ್ನಾಟಕ

ಮೂವರು ಕಳ್ಳರ ಸೆರೆ : 24 ಲಕ್ಷ ರೂ.ನ ಚಿನ್ನಾಭರಣ ವಶ

Pinterest LinkedIn Tumblr

kallaru

ಬೆಂಗಳೂರು: ನಕಲಿ ಬೀಗದ ಕೀ ಬಳಸಿ ಮನೆಗಳಿಗೆ ನುಗ್ಗಿ ಹಣ, ಚಿನ್ನಾಭರಣ ದೋಚುತ್ತಿದ್ದ ಮೂವರನ್ನು ವಿಜಯನಗರ ಪೊಲೀಸರು ಬಂಧಿಸಿ 24 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯನಗರದ ಲೋಕೇಶ್ ಅಲಿಯಾಸ್ ಲೋಕಿ (19), ನಂದಿನಿ ಬಡಾವಣೆಯ ವಸಂತ್‌ರಾಜ್ ಅಲಿಯಾಸ್ ವಸಂತ (21), ಮೂಡಲಪಾಳ್ಯದ ಸಂತು ಆಲಿಯಾಸ್ ಸಂತೋಷ್ (23) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 800 ಗ್ರಾಂ ಚಿನ್ನಾಭರಣ ಸೇರಿದಂತೆ 24 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು 2 ಮನೆ ಕಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಆರೋಪಿ ಲೋಕೇಶ್ ಸ್ನೇಹಿತ ವಿಜಯ್‌ಕುಮಾರ್ ಅವರ ಮನೆಗೆ ಆಗಾಗ ಬಂದು ಹೋಗುತ್ತಿದ್ದು, ಅವರ ಮನೆಯಲ್ಲಿದ್ದ ಕೀಯನ್ನು ಕಳವು ಮಾಡಿ ನಕಲಿ ಕೀಯನ್ನು ಮಾಡಿಸಿಕೊಂಡು ಇತರೆ ಆರೋಪಿಗಳಾದ ವಸಂತ್ ರಾಜ್ ಹಾಗೂ ಸಂತೋಷ್ ಜತೆ ಸೇರಿ ಅವರ ಮನೆಯಲ್ಲಿದ್ದ 2.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.

ಇದಲ್ಲದೇ, ಕಳೆದ ವರ್ಷ ಮೂಡಲಪಾಳ್ಯದ ಲಕ್ಷ್ಮಣ ಅವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಲೋಕೇಶ್ ಮಾಗಡಿಗೆ ಹೋದ ಸಂದರ್ಭದಲ್ಲಿ ಕಾರು ಅಪಘಾತವಾದಾಗ ಲಕ್ಷ್ಮಣ ಅವರ ಮನೆಯ ಕೀಯನ್ನು ಕಳವು ಮಾಡಿ ನಕಲಿ ಕೀ ಮಾಡಿಸಿಕೊಂಡು 24 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಇತರ ಆರೋಪಿಗಳ ಜತೆ ಸೇರಿ ಕಳವು ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment