ಬೆಂಗಳೂರು, ಮೇ ೬: ಅಮಾನತ್ ಬ್ಯಾಂಕ್ನಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಶರೀಫ್ ಶಿವಾಜಿನಗರದಲ್ಲಿರುವ ಬ್ಯಾಂಕ್ ಆವರಣದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.
ನಿನ್ನೆ ಮಳೆ ಬಂದ ಕಾರಣ ಆರೋಗ್ಯ ಏರುಪೇರಾಯಿತು. ರಾತ್ರಿ ೧೧ ಗಂಟೆ ನಂತರ ಮನೆಗೆ ತೆರಳಿದ್ದೆ. ಆದರೆ ಬೆಳಿಗ್ಗೆ ಇಲ್ಲಿಗೆ ಆಗಮಿಸಿ ಉಪವಾಸ ಆರಂಭಿಸಿದ್ದೇನೆ ಎಂದು ಜಾಫರ್ ಶರೀಫ್ ಸ್ಪಷ್ಟಪಡಿಸಿದರು.
ಸಿಒಡಿ ಮತ್ತು ಸಹಕಾರ ಇಲಾಖೆ ನಡೆಸಿದ ತನಿಖೆಯಲ್ಲಿ ಯಾವುದೇ ಪ್ರಯೋಜನ ಆಗಿಲ್ಲ. ಸಿಬಿಐನಿಂದ ಮಾತ್ರ ಸತ್ಯ ಹೊರಬಂದು ಆರೋಪಿಗಳಿಗೆ ಶಿಕ್ಷೆಯಾಗಬಹುದು. ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು ಇರಬಹುದು, ಇಲ್ಲದವರು ಇರಬಹುದು. ಇಲ್ಲಿ ಪಕ್ಷ ಮುಖ್ಯವಲ್ಲ. ಬಡವರಿಗೆ ಅನ್ಯಾಯ ಆಗಬಾರದು. ಸಿಬಿಐ ನೇರವಾಗಿ ಪ್ರಕರಣವನ್ನು ಕೈಗೆತ್ತಿಕೊಳ್ಳಬಹುದು ಅಥವಾ ರಾಜ್ಯ ಸರ್ಕಾರ ವಹಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಬಡವರ ಪರವಾಗಿದೆ. ಆದರೆ ಈ ವಿಷಯದಲ್ಲಿ ಮಾತ್ರ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸರ್ದಾರ್ ಅಹ್ಮದ್ ಖುರೇಷಿ, ಅಮೀರ್ ಜಾನ್ ಮತ್ತಿತರರು ಭಾಗವಹಿಸಿದ್ದರು.
ಕರ್ನಾಟಕ