ನವದೆಹಲಿ: ಬ್ಯಾಂಕ್ಗಳಿಂದ ಸಾಲ ಪಡೆದು ಕಟ್ಟಲಾಗದೆ ತಲೆಮರೆಸಿಕೊಳ್ಳುವುದು, ಇಲ್ಲವೆ ವಿದೇಶಕ್ಕೆ ಪರಾರಿಯಾದರೆ ಜೋಕೆ. ಏಕೆಂದರೆ ಇನ್ನು ಮುಂದೆ ಸಾಲ ಮಾಡಿಕೊಂಡು ಹಿಂದಿರುಗಿಸದೆ ಇರುವವರು ಜೀವನ ಪೂರ್ತಿ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸುವಂತಿಲ್ಲ. ಕೇವಲ ಮತದಾನದ ಹಕ್ಕು ಹೊಂದಿರುತ್ತಾರೆ. ಗ್ರಾಮಪಂಚಾಯ್ತಿ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಸುಸ್ತಿದಾರರು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆ ಹಿಡಿಯುವಂತೆ ಸಂಸತ್ನ ಜಂಟಿ ನೀತಿ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕರ್ನಾಟಕದ ಉದ್ಯಮಿ ವಿಜಯ್ ಮಲ್ಯ ದೇಶದ ವಿವಿಧ ಬ್ಯಾಂಕ್ಗಳಿಂದ ೯ ಸಾವಿರ ಕೋಟಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಈ ರೀತಿ ಬ್ಯಾಂಕ್ಗಳಿಗೆ ವಂಚಿಸುವವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಯಾವುದೇ ಒಬ್ಬ ಭಾರತದ ಪ್ರಜೆ ಬ್ಯಾಂಕ್ಗಳಲ್ಲಿ ಸುಸ್ತಿದಾರನೆಂದು ಘೋಷಣೆಯಾಗುವಂತಿಲ್ಲ. ಸಹಕಾರ ಸಂಘದಿಂದ ಹಿಡಿದು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಆತ ಸಾಲ ಪಡೆದು ಹಿಂದಿರುಗಿಸದಿದ್ದರೆ ಚುನಾವಣೆಗೆ ಸ್ಪರ್ಧಿಸುವ ಅರ್ಹತೆಯನ್ನೆ ಕಳೆದುಕೊಳ್ಳುತ್ತಾನೆ.
ಬಿಜೆಪಿ ಸಂಸದ ಭೂಪೇಂದ್ರ ಯಾದವ್ ನೇತೃತ್ವದ ಸಂಸತ್ತಿನ ನೀತಿ ಸಂಹಿತೆ ಇದನ್ನು ಶಿಫಾರಸ್ಸು ಮಾಡಿದೆ. ಪ್ರಸಕ್ತ ಅಧಿವೇಶನದಲ್ಲೇ ಈ ಮಸೂದೆಯನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸರ್ವಪಕ್ಷಗಳ ಮುಖಂಡರ ಸಭೆಯನ್ನು ಕರೆದು ಮುಖಂಡರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ಎಲ್ಲರೂ ಒಪ್ಪಿದರೆ ಈ ಅಧಿವೇಶನದಲ್ಲೇ ಮಸೂದೆ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.
ಯಾರೂ ಟಿಕೆಟ್ ನೀಡಬೇಡಿ:
ಬ್ಯಾಂಕ್ಗಳಿಗೆ ವಂಚನೆ ಮಾಡುವ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಯಾರೇ ಇರಲಿ ಅಂಥವರು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಬಾರದು ಎಂದು ಸಮಿತಿ ಸಲಹೆ ಮಾಡಿದೆ. ಚೆಕ್ಬೌನ್ಸ್ ಪ್ರಕರಣವನ್ನು ಸಹ ಗಂಭೀರವಾಗಿ ಪರಿಗಣಿಸಬೇಕು, ಅದರಲ್ಲೂ ಸುಸ್ತಿದಾರನೆಂದು ಘೋಷಿಸಿದರೆ ಟಿಕೆಟ್ ನೀಡುವುದಕ್ಕೆ ಕಡಿವಾಣ ಹಾಕುವಂತೆ ಸಮಿತಿ ಹೇಳಿದೆ.
ಮಲ್ಯ ಅನರ್ಹ:
ದೇಶದ ವಿವಿಧ ಬ್ಯಾಂಕ್ಗಳಿಂದ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರ ರಾಜಸಭಾ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಸುಮಾರು ಒಂಭತ್ತು ಸಾವಿರ ಕೋಟಿ ಸಾಲ ಪಡೆದು ಲಂಡನ್ನಲ್ಲಿರುವ ವಿಜಯ್ ಮಲ್ಯರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು. ಮುಂದೆ ಅವರು ನಿವೃತ್ತಿಯಾದ ನಂತರ ಯಾವುದೇ ರೀತಿಯ ಸವಲತ್ತುಗಳನ್ನು ಸರ್ಕಾರ ನೀಡಬಾರದು ಎಂದು ಒತ್ತಾಯಿಸಲಾಗಿದೆ. ಸಮಿತಿಯ ಶಿಪಾರಸ್ಸಿನಂತೆ ರಾಜ್ಯಸಭೆಯ ಸಭಾಪತಿ ಅಮೀದ್ ಅನ್ಸಾರಿ ಸದ್ಯದಲ್ಲೇ ಮಲ್ಯ ಅವರ ಸದಸ್ಯತ್ವವನ್ನು ಅನರ್ಹಗೊಳಿಸುವ ಸಾಧ್ಯತೆ ಇದೆ.